ADVERTISEMENT

ಒಕ್ಕಲಿಗರು ಉದ್ಯಮದಲ್ಲೂ ಸಾಧನೆ ಮಾಡಬೇಕು: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 16:17 IST
Last Updated 21 ಜನವರಿ 2024, 16:17 IST
‘ಉದ್ಯಮಿಕ ಒಕ್ಕಲಿಗ ಎಕ್ಸ್‌ಪೋ’ ಸಮಾರೋಪದಲ್ಲಿ ಭಾಗವಹಿಸಿದ್ದ ಶಾಸಕರಾದ ಬಸವರಾಜ ಬೊಮ್ಮಾಯಿ ಮತ್ತು ಡಾ.ಸಿ.ಎನ್.ಅಶ್ವತ್ಥನಾರಾಯಣ.
‘ಉದ್ಯಮಿಕ ಒಕ್ಕಲಿಗ ಎಕ್ಸ್‌ಪೋ’ ಸಮಾರೋಪದಲ್ಲಿ ಭಾಗವಹಿಸಿದ್ದ ಶಾಸಕರಾದ ಬಸವರಾಜ ಬೊಮ್ಮಾಯಿ ಮತ್ತು ಡಾ.ಸಿ.ಎನ್.ಅಶ್ವತ್ಥನಾರಾಯಣ.   

ಬೆಂಗಳೂರು: ‘ಕೃಷಿ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಒಕ್ಕಲಿಗರು ಉದ್ಯಮ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು. ಆ ಮೂಲಕ ಉದ್ಯೋಗ ನೀಡುವವರೂ ಆಗಬೇಕು’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ‘ಉದ್ಯಮಿಕ ಒಕ್ಕಲಿಗ ಎಕ್ಸ್‌ಪೋ’ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಅವರು, ‘ಹಿಂದಿನ ದಿನಗಳಲ್ಲಿ ಜಮೀನಿನ ಒಡೆತನ ಇದ್ದವರಷ್ಟೇ ಜಗತ್ತನ್ನು ಆಳುತ್ತಿದ್ದರು. ಈಗ ಜ್ಞಾನವಂತರು ಜಗತ್ತನ್ನು ಆಳುತ್ತಿದ್ದಾರೆ. ಒಕ್ಕಲಿಗರು ಜ್ಞಾನಾರ್ಜನೆಗೆ ಒತ್ತು ನೀಡಬೇಕು’ ಎಂದರು.

ಕೃಷಿ ಚಟುವಟಿಕೆಗಳಿಂದ ದೇಶದ ಉದ್ಯಮ ವಲಯಗಳು ಅಭಿವೃದ್ಧಿ ಹೊಂದುತ್ತವೆ. ಆದರೆ, ಕೃಷಿ ಚಟುವಟಿಕೆ ನಡೆಸುವವರು ಹೆಚ್ಚು ಲಾಭ ಗಳಿಸಲು ಸಾಧ್ಯವಾಗುತ್ತಿಲ್ಲ. ಕೃಷಿಯನ್ನು ಮಾತ್ರ ನೆಚ್ಚಿಕೊಂಡರೆ ಅಭಿವೃದ್ಧಿ ಸಾಧ್ಯವಿಲ್ಲ. ಕೃಷಿಯ ಜತೆಯಲ್ಲೇ ವ್ಯಾಪಾರ, ಉದ್ಯೋಗಕ್ಕೂ ಒತ್ತು ನೀಡಬೇಕು’ ಎಂದು ಹೇಳಿದರು.

ADVERTISEMENT

ಜಮೀನು ಮಾರಿ ಚುನಾವಣೆಗೆ ಸ್ಪರ್ಧಿಸುವವರು ಒಕ್ಕಲಿಗ ಸಮುದಾಯದಲ್ಲಿ ಜಾಸ್ತಿ ಇದ್ದಾರೆ. ಈಗ ಉದ್ಯಮ ಮತ್ತು ಉದ್ಯೋಗದಲ್ಲಿ ಛಲದಿಂದ ದುಡಿಯಬೇಕು ಎಂದರು.

ಪಟ್ಟನಾಯಕನಹಳ್ಳಿಯ ಸ್ಪಟಿಕಪುರಿ ಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ವಿಧಾನ ಪರಿಷತ್‌ನ ಮಾಜಿ ಸಭಾಪತಿ ಬಿ.ಎಲ್. ಶಂಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.