ಬೆಂಗಳೂರು: ಬಿಬಿಎಂಪಿ, ಬಿಎಸ್ಡಬ್ಲ್ಯುಎಂಎಲ್ ಹಾಗೂ ತ್ಯಾಜ್ಯ ಸಂಗ್ರಹ–ಸಾಗಣೆ ಗುತ್ತಿಗೆದಾರರ ನಡುವಿನ ಹಗ್ಗಜಗ್ಗಾಟದಲ್ಲಿ ಮನೆಗಳಿಂದ ಕಸ ಸಂಗ್ರಹಿಸುವವರಿಗೆ ಆರು ತಿಂಗಳಿಂದ ವೇತನ ಇಲ್ಲದಂತಾಗಿದೆ.
ಪ್ರಥಮ ಹಂತದಲ್ಲಿ ತ್ಯಾಜ್ಯ ಸಂಗ್ರಹ, ಸಾಗಣೆ ಮತ್ತು ವಿಲೇವಾರಿ ಗುತ್ತಿಗೆದಾರರಿಗೆ 2025ರ ಜನವರಿಯಿಂದ ಬಿಲ್ ಪಾವತಿಯಾಗಿಲ್ಲ. ಇದರಿಂದ ಗುತ್ತಿಗೆದಾರರು ನೇಮಿಸಿಕೊಂಡಿರುವ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ಆಟೊ ಚಾಲಕರು, ಸಹಾಯಕರು, ಲೋಡರ್ಗಳಿಗೆ ವೇತನ ಸಿಗುತ್ತಿಲ್ಲ. ಕೆಲವು ಗುತ್ತಿಗೆದಾರರು ಅಲ್ಪಸ್ವಲ್ಪ ನೀಡುತ್ತಿದ್ದರೂ, ಬಹುತೇಕರು ಆರು ತಿಂಗಳಿನಿಂದಲೂ ಸಂಕಷ್ಟಕ್ಕೊಳಗಾಗಿದ್ದಾರೆ.
‘ಬಿಬಿಎಂಪಿಯಿಂದ ‘ಸಪ್ಲೈ ಆರ್ಡರ್’ ಪಡೆದ ಗುತ್ತಿಗೆದಾರರಿಗೆ ಬಿಎಸ್ಡಬ್ಲ್ಯುಎಂಎಲ್ನಿಂದ ಬಿಲ್ ಪಾವತಿಯಾದರೆ ಜಿಎಸ್ಟಿ ಪಾವತಿಸಬೇಕಾಗುತ್ತದೆ. ಇದು ನಮಗೆ ಹೊರೆಯಾಗುತ್ತದೆ. ಬಿಬಿಎಂಪಿಯಿಂದೇ ಹಣ ಪಾವತಿಸಿ. ಬಿಎಸ್ಡಬ್ಲ್ಯುಎಂಎಲ್ಬಿಲ್ ಪಾವತಿಸಿದರೆ, ಜಿಎಸ್ಟಿ ಅನ್ವಯವಾಗುವುದಿಲ್ಲ, 4ಜಿ ವಿನಾಯಿತಿ ಸಿಗುತ್ತದೆ ಎಂಬುದನ್ನು ಆದೇಶದಲ್ಲಿ ಸ್ಪಷ್ಟಪಡಿಸಿ ಎಂದು ಗುತ್ತಿಗೆದಾರರು 2024ರ ನವೆಂಬರ್ನಿಂದಲೂ ಒತ್ತಾಯಿಸುತ್ತಲೇ ಬಂದಿದ್ದಾರೆ. ಬಿಎಸ್ಡಬ್ಲ್ಯುಎಂಎಲ್ ಅಧಿಕಾರಿಗಳು ಇಂದಿಗೂ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ’ ಎಂದು ಆರೋಪಿಸಲಾಗಿದೆ.
‘ಸರ್ಕಾರಿ ಪ್ರಾಧಿಕಾರಕ್ಕೆ ಮಾತ್ರ ಜಿಎಸ್ಟಿ ಅನ್ವಯವಾಗುವುದಿಲ್ಲ. ಬಿಎಸ್ಡಬ್ಲ್ಯುಎಂಎಲ್ ಷೇರುದಾರರ ರಚನೆಯಾಗಿದ್ದು, ಇದನ್ನು ಮಾರ್ಪಡಿಸಿದರೆ ಜಿಎಸ್ಟಿ ವಿನಾಯಿತಿ ಲಭ್ಯವಾಗುತ್ತದೆ. ಬಿಎಸ್ಡಬ್ಲ್ಯುಎಂಎಲ್ಗೆ ಗುತ್ತಿಗೆದಾರರು ನೀಡಿರುವ ಬಿಲ್ನಲ್ಲಿ ‘ತೆರಿಗೆ ಅನ್ವಯವಾದರೆ ಅದನ್ನು ಸಂಬಂಧಿಸಿದ ಪ್ರಾಧಿಕಾರ ಪಾವತಿಸಬೇಕು’ ಎಂದು ಷರತ್ತು ವಿಧಿಸಿದ್ದಾರೆ. ಇದು ಪ್ರಸ್ತಾವಿತ ಮಾದರಿಯಲ್ಲಿ ಇಲ್ಲ. ಬಿಎಸ್ಡಬ್ಲ್ಯುಎಂಎಲ್ನಲ್ಲಿ ಇದು ಅನ್ವಯವಾಗುವುದಿಲ್ಲ’ ಎಂದು ತೆರಿಗೆ ಲೆಕ್ಕಪರಿಶೋಧಕರು ಅಭಿಪ್ರಾಯ ನೀಡಿದ್ದಾರೆ.
‘ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಬಿಎಸ್ಡಬ್ಲ್ಯುಎಂಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಹಾಗೂ ಗುತ್ತಿಗೆದಾರರೊಂದಿಗೆ ಕೆಲವು ಸಭೆಗಳು ನಡೆದು, ಜಿಎಸ್ಟಿಯಿಂದ ವಿನಾಯಿತಿ ನೀಡಿರುವಂತೆ ಗುತ್ತಿಗೆದಾರರಿಗೆ ನೀಡುವ ಆದೇಶದಲ್ಲಿ ತಿಳಿಸಲಾಗುತ್ತದೆ ಎಂಬ ಭರವಸೆ ದೊರೆತಿತ್ತು. ಆದರೆ, ಮತ್ತೆ 2024ರ ಡಿಸೆಂಬರ್ ಆದೇಶವನ್ನೇ ನಮೂದಿಸಿದ್ದು, ಜಿಎಸ್ಟಿ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿಲ್ಲ’ ಎಂದು ಗುತ್ತಿಗೆದಾರರು ಆರೋಪಿಸಿದರು.
ತ್ಯಾಜ್ಯ ವಿಲೇವಾರಿಗೆ ಸರಬರಾಜು ಆದೇಶ ನೀಡಿರುವ ಬಿಬಿಎಂಪಿಯಿಂದ ಬಿಎಸ್ಡಬ್ಲ್ಯುಎಂಎಲ್ಗೆ ಬಿಲ್ ಪಾವತಿಯ ಜವಾಬ್ದಾರಿಯನ್ನು ವರ್ಗಾಯಿಸಿದ್ದರೂ, ಗೊಂದಲಗಳನ್ನು ನಿವಾರಿಸಿಲ್ಲ. ಹೀಗಾಗಿ, ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವವರು ವೇತನವಿಲ್ಲದೆ ಸಂಕಷ್ಟದಲ್ಲಿದ್ದಾರೆ.
ಸಮಸ್ಯೆ ಬಗಹರಿಸಿದ್ದೇವೆ: ಹರೀಶ್
‘ಘನ ತ್ಯಾಜ್ಯ ವಿಲೇವಾರಿ ಸಂಗ್ರಹಣೆ ಮತ್ತು ಸಾಗಣೆ ಕುರಿತ ಬಿಲ್ಗಳನ್ನು ಬಿಎಸ್ಡಬ್ಲ್ಯುಎಂಎಲ್ನಿಂದಲೇ 2025ರ ಜನವರಿಯಿಂದ ಪಾವತಿಸಲು ನಿರ್ಧರಿಸಲಾಗಿದೆ. ತಿಂಗಳಿಗೆ ₹55.93 ಕೋಟಿಯಂತೆ ₹167.79 ಕೋಟಿ ಅನುದಾನ ಮತ್ತು ಪ್ಲಾಂಟ್ಗಳ ಕಾರ್ಯಾಚರಣೆ– ನಿರ್ವಹಣೆಗೆ ಬಿಲ್ ಪಾವತಿಸಲು ₹40 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ ಗುತ್ತಿಗೆದಾರರು ಬಿಲ್ ನೀಡುತ್ತಿಲ್ಲ. ಅವರು ಹೇಳಿದಂತೇ ಸ್ಥಳೀಯ ವಿಭಾಗಗಳಿಂದಲೇ ಆದೇಶವನ್ನು ನೀಡಿ ಅಧಿಸೂಚನೆಯಂತೆ ಘನತ್ಯಾಜ್ಯ ನಿರ್ವಹಣೆಗೆ ಜಿಎಸ್ಟಿ ವಿನಾಯಿತಿ ಇರುತ್ತದೆ. ಬಿಎಸ್ಡಬ್ಲ್ಯುಎಂಎಲ್ ಆದೇಶದಂತೆ (ಎಂಡಿ–548/2024–25) ಬಿಲ್ ಸಲ್ಲಿಸಲು ಹೇಳಲಾಗಿದೆ. ಆದರೆ ಅವರು ಬಿಲ್ ನೀಡುತ್ತಿಲ್ಲ’ ಎಂದು ಬಿಎಸ್ಡಬ್ಲ್ಯುಎಂಎಲ್ ಮುಖ್ಯ ಕಾರ್ಯನಿರ್ಹಣಾಧಿಕಾರಿ (ಸಿಇಒ) ಕೆ. ಹರೀಶ್ ಕುಮಾರ್ ತಿಳಿಸಿದರು.
ಪರಿಶೀಲಿಸುವೆ: ‘ಗುತ್ತಿಗೆದಾರರೊಂದಿಗೆ ಸಭೆ ನಡೆಸಿ ಅದಕ್ಕೆ ಅನುಗುಣವಾಗಿ ಆದೇಶ ನೀಡುವಂತೆ ಜೂನ್ 26ರಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಲ್ಲಿಯೂ ಸಮಸ್ಯೆ ಇದೆ ಎಂದು ಗುತ್ತಿಗೆದಾರರು ಹೇಳುತ್ತಿದ್ದರೆ ಸೋಮವಾರ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಬಿಎಸ್ಡಬ್ಲ್ಯುಎಂಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರರಾವ್ ಹೇಳಿದರು.
‘ಕೆಲ ಅಧಿಕಾರಿಗಳಿಂದ ಗೊಂದಲ’
‘ತ್ಯಾಜ್ಯ ಸಂಗ್ರಹಣೆ ಸಾಗಣೆ ಮತ್ತು ವಿಲೇವಾರಿಯನ್ನು ಅಗತ್ಯ ಸಿಬ್ಬಂದಿ ಮತ್ತು ವಾಹನಗಳೊಂದಿಗೆ ಮಾಡಲು ಸೇವಾದಾರ ಗುತ್ತಿಗೆದಾರರಾಗಿ ಪಾಲಿಕೆಯಿಂದ ನಮಗೆ ಸರಬರಾಜು ಆದೇಶ ನೀಡಲಾಗಿದೆ. ಬಿಬಿಎಂಪಿ ಬದಲು ಬಿಎಸ್ಡಬ್ಲ್ಯುಎಂಎಲ್ನಿಂದ ಬಿಲ್ ಪಾವತಿಸಿದರೆ ‘ಟ್ರೈ ಪಾರ್ಟಿ’ಯಿಂದ ಹಣ ಪಡೆದುಕೊಂಡಂತಾಗುತ್ತದೆ. ಇದಕ್ಕೆ ಜಿಎಸ್ಟಿ ಅನ್ವಯವಾಗುತ್ತದೆ. ಇದು ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ನೀಡಿ ಎಂದು ನಾವು ಆರು ತಿಂಗಳಿಂದ ಮನವಿ ಮಾಡಿಕೊಂಡಿದ್ದರೂ ಕೆಲ ಅಧಿಕಾರಿಗಳಿಂದ ಗೊಂದಲ ಮುಂದುವರಿದಿದೆ. ಮಹೇಶ್ವರ ರಾವ್ ಅವರು ನಮ್ಮ ಮನವಿಗೆ ಸ್ಪಂದಿಸಿದ್ದರೂ ಕೆಲ ಅಧಿಕಾರಿಗಳು ಅದನ್ನು ಅನುಷ್ಠಾನ ಮಾಡುತ್ತಿಲ್ಲ’ ಎಂದು ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು– ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್. ಬಾಲಸುಬ್ರಮಣಿಯಂ ದೂರಿದರು.
‘ಈಗಾಗಲೇ ಸೇವಾ ಶುಲ್ಕ ಎಂದು ಗುತ್ತಿಗೆದಾರರ ಮೇಲೆ ಹೊರೆ ಬಿದ್ದು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಬಿಬಿಎಂಪಿಯಿಂದ ಆದೇಶ ಪಡೆದು ಬಿಎಸ್ಡಬ್ಲ್ಯುಎಂಎಲ್ನಿಂದ ಬಿಲ್ ತೆಗೆದುಕೊಂಡರೆ ಜಿಎಸ್ಟಿ ಹಾಗೂ ಸೇವಾ ಶುಲ್ಕವೂ ಅನ್ವಯವಾಗುತ್ತದೆ. ಈ ಬಗ್ಗೆ ತೆರಿಗೆ ಲೆಕ್ಕ ಪರಿಶೋಧಕರು ಆಂತರಿಕ ಲೆಕ್ಕ ಪರಿಶೋಧಕರು ಅಭಿಪ್ರಾಯ ತಿಳಿಸಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಗುತ್ತಿಗೆದಾರರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ನೇರವಾಗಿ ವೇತನ ಪಾವತಿಸಿ’
‘ಬಿಬಿಎಂಪಿ ಬಿಎಸ್ಡಬ್ಲ್ಯುಎಂಎಲ್ ಹಾಗೂ ಗುತ್ತಿಗೆದಾರರ ನಡುವಿನ ಸಮಸ್ಯೆಯಿಂದ ನಗರದಲ್ಲಿ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ಆಟೊ ಚಾಲಕರು ಸಹಾಯಕರು ಲೋಡರ್ಗಳಿಗೆ ವೇತನ ಸಿಗುತ್ತಿಲ್ಲ. ಗುತ್ತಿಗೆದಾರರಿಗೇ ಹಣ ಬಾರದಿದ್ದರೆ ಅವರು ಹೇಗೆ ಕೊಡುತ್ತಾರೆ. ಆದ್ದರಿಂದ ನಮಗೆಲ್ಲ ಬಿಬಿಎಂಪಿಯಿಂದ ನೇರ ವೇತನ ಪದ್ಧತಿಯಡಿ ಜಾರಿಗೆ ತರಬೇಕು’ ಎಂದು ಕಾರ್ಮಿಕ ಸಂರಕ್ಷಣಾ ಟ್ರೇಡ್ ಯೂನಿಯನ್ ಅಧ್ಯಕ್ಷ ತ್ಯಾಗರಾಜ್ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.