ADVERTISEMENT

ಮಳೆ ನೀರು ಹಿಡಿದಿಡಲು ಕೆರೆ, ಕಲ್ಯಾಣಿ ಸಜ್ಜು! ಜಲಶಕ್ತಿ ಅಭಿಯಾನ ಏ.‌ 9ರಂದು ಚಾಲನೆ

ರಾಜ್ಯದಲ್ಲೂ ‘ಜಲಶಕ್ತಿ ಅಭಿಯಾನ’ ಕಾರ್ಯಕ್ರಮಕ್ಕೆ ಏಪ್ರಿಲ್‌ 9ರಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 19:57 IST
Last Updated 29 ಮಾರ್ಚ್ 2021, 19:57 IST
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಗಿಡಕ್ಕೆ ನೀರೆರೆಯುವ ಮೂಲಕ ‘ಜಲಶಕ್ತಿ’ ಅಭಿಯಾನಕ್ಕೆ ಚಾಲನೆ ನೀಡಿದರು. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧ, ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತ ಅನಿರುದ್ಧ ಶ್ರವಣ್ ಇದ್ದರು.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಗಿಡಕ್ಕೆ ನೀರೆರೆಯುವ ಮೂಲಕ ‘ಜಲಶಕ್ತಿ’ ಅಭಿಯಾನಕ್ಕೆ ಚಾಲನೆ ನೀಡಿದರು. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧ, ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತ ಅನಿರುದ್ಧ ಶ್ರವಣ್ ಇದ್ದರು.   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ‘ಮಳೆ ನೀರು ಹಿಡಿಯಿರಿ’ (ಕ್ಯಾಚ್‌ ದ ರೈನ್‌) ಸಲಹೆಯನ್ನು ಸಾಕಾರಗೊಳಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಬೃಹತ್‌ ಕಾರ್ಯಕ್ರಮ ಹಮ್ಮಿಕೊಂಡಿದೆ.

ಮುಂಬರುವ ಮುಂಗಾರು ಆರಂಭವಾಗುವುದರೊಳಗೆ ಗ್ರಾಮೀಣ ಪ್ರದೇಶದ ಕೆರೆಗಳು, ಕಲ್ಯಾಣಿಗಳು ಮತ್ತು ಗೋಕಟ್ಟೆಗಳಲ್ಲಿ ತುಂಬಿರುವ ಹೂಳು ತೆಗೆದು ಮಳೆ ನೀರು ಸಂಗ್ರಹಕ್ಕೆ ಸಜ್ಜುಗೊಳಿಸಲು ‘ಜಲಶಕ್ತಿ ಅಭಿಯಾನ’ಕ್ಕೆ ಏಪ್ರಿಲ್‌ 9 ರಂದು ಚಾಲನೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಯೋಜನೆಯಡಿ ಎಲ್ಲ ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ ಕೆರೆಗಳು, ಕಲ್ಯಾಣಿಗಳು ಮತ್ತು ಗೋಕಟ್ಟೆಗಳನ್ನು ಪುನಶ್ಚೇತನಗೊಳಿಸಲಾಗುವುದು. ಇವೆಲ್ಲ ಕಾಮಗಾರಿಗಳನ್ನು ನರೇಗಾ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ಜೂನ್‌ನಲ್ಲಿ ಮೊದಲ ವಾರದೊಳಗೇ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ನರೇಗಾ ಅಡಿ ರಾಜ್ಯಕ್ಕೆ ಅತಿ ಹೆಚ್ಚು ಅಂದರೆ 15 ಕೋಟಿ ಮಾನವ ದಿನಗಳು ಲಭ್ಯವಾಗಿದೆ. ಇದರಿಂದ ಕೇಂದ್ರದಿಂದ ರಾಜ್ಯಕ್ಕೆ ನರೇಗಾ ಅಡಿ ಬರುವ ಮೊತ್ತ ₹800 ಕೋಟಿಯಷ್ಟು ಹೆಚ್ಚಾಗಲಿದೆ ಎಂದು ಈಶ್ವರಪ್ಪ ಹೇಳಿದರು.

ಸುಮಾರು 1,000 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಮಳೆ ನೀರಿನಿಂದ ಕೆರೆಗಳು ಮತ್ತು ಕಲ್ಯಾಣಿಗಳನ್ನು ತುಂಬಿಸುವ ಉದ್ದೇಶದಿಂದ ಈಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗಿದೆ. ಗೂಗಲ್‌ ಅರ್ಥ್‌ ಅಥವಾ ದಿಶಾಂಕ್‌ ಮೊಬೈಲ್‌ ಅಪ್ಲಿಕೇಷನ್ ಬಳಸಿಕೊಂಡು ಕೆರೆಗೆ ಹರಿದು ಬರುವ ಕಾಲುವೆ, ಹಳ್ಳಗಳನ್ನು ಗುರುತಿಸಿ ಅವುಗಳನ್ನು ದುರಸ್ತಿಗೊಳಿಸುವುದರ ಜತೆಗೆ ಹೂಳು ತೆಗೆಯಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.