ಬೆಂಗಳೂರು: ‘ಬೈಕ್ ಟ್ಯಾಕ್ಸಿ ನಮಗೆ ಕೇವಲ ಸಾರಿಗೆ ಸಾಧನವಲ್ಲ. ಅದು ನಮ್ಮ ಅನ್ನ. ಉತ್ತಮ ಭವಿಷ್ಯಕ್ಕಾಗಿ ನಮ್ಮ ಭರವಸೆ. ನಮ್ಮ ಕುಟುಂಬದ ಘನತೆಯನ್ನು ಉಳಿಸುವ ಏಕೈಕ ಮಾರ್ಗ. ಕೈಮುಗಿದು ಎದೆಯಾಳದಿಂದ ನಿಮ್ಮನ್ನು ಕೇಳಿಕೊಳ್ಳುತ್ತಿದ್ದೇವೆ. ನಮ್ಮ ಬದುಕು ಉಳಿಸಿ..’
ಗಿಗ್ ಕಾರ್ಮಿಕರಾಗಿರುವ ಬೈಕ್ ಟ್ಯಾಕ್ಸಿ ವೆಲ್ಫೇರ್ ಅಸೊಸೀಯೇಷನ್ ಸದಸ್ಯರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಭಾವನಾತ್ಮಕವಾಗಿ ಬರೆದ ಬಹಿರಂಗ ಪತ್ರ ಇದು.
‘ಬೆಳಿಗ್ಗೆ ಮಳೆಯಲ್ಲಿ ನೆನೆಯುತ್ತಾ, ಮಧ್ಯಾಹ್ನ ಬಿಸಿಲಲ್ಲಿ ಬೆವರುತ್ತಾ, ಸಂಜೆ ಮಂದ ಬೆಳಕಿನಲ್ಲಿ ಜನರನ್ನು ಆಸ್ಪತ್ರೆ, ಶಾಲೆ, ಕಚೇರಿ, ಮನೆಗಳಿಗೆ ಕರೆದೊಯ್ಯುತ್ತೇವೆ. ನಮ್ಮಲ್ಲಿ ಹೆಚ್ಚಿನವರು ಸಣ್ಣ ಮನೆಗಳಿಂದ ಬಂದವರು. ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಬಂದ ಯುವಕ, ಯುವತಿಯರು ನಾವು. ಈ ಕೆಲಸದಲ್ಲಿ ನಾವು ಸ್ವಾತಂತ್ರ್ಯ, ವಿನಯ ಮತ್ತು ಗೌರವಗಳಂಥ ಅಮೂಲ್ಯವಾದುವುಗಳನ್ನು ಕಂಡುಕೊಂಡಿದ್ದೇವೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘ಬೈಕ್ ಟ್ಯಾಕ್ಸಿ ಓಡಿಸುವ ಕೆಲಸ ನಮ್ಮನ್ನು ಸಬಲರನ್ನಾಗಿ ಮಾಡಿದೆ. ತಿಂಗಳಿಗೆ ₹30,000ದಿಂದ ₹35,000 ಆದಾಯದೊಂದಿಗೆ ನಾವು ನಮ್ಮ ಕಾಲ ಮೇಲೆ ನಿಲ್ಲಲು, ನಮ್ಮ ಮಕ್ಕಳ ಶಿಕ್ಷಣಕ್ಕಾಗಿ ಉಳಿಸಲು, ವೃದ್ಧ ಪೋಷಕರನ್ನು ನೋಡಿಕೊಳ್ಳಲು ಸಾಧ್ಯವಾಗಿದೆ. ನಮ್ಮಲ್ಲಿ ಹಲವರು ನಿರುದ್ಯೋಗಿಗಳಾಗಿದ್ದರು ಇಲ್ಲವೇ ಈ ಕೆಲಸಕ್ಕೆ ಬರುವ ಮೊದಲು ದಿನಗೂಲಿ ಮಾಡುತ್ತಿದ್ದರು. ಸಾರ್ವಜನಿಕರಿಗೆ ಸೇವೆ ನೀಡಲು ನಾವು ಹೆಮ್ಮೆ ಪಡುತ್ತಿದ್ದೇವೆ’ ಎಂದು ವಿವರಿಸಿದ್ದಾರೆ.
‘ನಮ್ಮಲ್ಲಿ ಶೇ 80ರಷ್ಟು ಜನರು ಕನ್ನಡಿಗರೇ ಆಗಿದ್ದಾರೆ. ಯಾರನ್ನೂ ಅವಲಂಬಿಸದೆ ಶ್ರಮಿಸುತ್ತಿರುವ ಈ ರಾಜ್ಯದ ಯುವಜನರ ಕಸುಬು ಇದು. ನಮ್ಮನ್ನು ಹೊರಗೆ ತಳ್ಳುವ ನಿಯಮಗಳನ್ನು ನೋಡಿದರೆ ಗೊಂದಲ ಮಾತ್ರವಲ್ಲ, ಆಘಾತವೂ ಆಗುತ್ತಿದೆ. ಆಹಾರ ಇನ್ನಿತರ ಪದಾರ್ಥಗಳನ್ನು ವಿತರಿಸುವ ಸೇವೆಗಳನ್ನು ನಮ್ಮಂತೆ ದ್ವಿಚಕ್ರ ವಾಹನಗಳಲ್ಲಿ ಅನೇಕರು ನಿರ್ವಹಿಸುತ್ತಿದ್ದಾರೆ. ಅವರಿಗೆ ಮುಕ್ತ ಅನುಮತಿ ಇದೆ. ಘನತೆಯಿಂದ ಗಳಿಸುವ ನಮ್ಮ ಹಕ್ಕನ್ನು ಮಾತ್ರ ಯಾಕೆ ವಿಭಿನ್ನವಾಗಿ ಪರಿಗಣಿಸುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ.
‘ನಾವು ಯಾವುದೇ ಸಹಾಯವನ್ನು ಕೇಳುತ್ತಿಲ್ಲ. ನಮ್ಮ ಸ್ವಂತ ಜೀವನೋಪಾಯದ ಅವಕಾಶವನ್ನಷ್ಟೇ ಕೇಳುತ್ತಿದ್ದೇವೆ. ಕಾನೂನುಗಳು ಜೀವನೋಪಾಯವನ್ನು ಕಸಿದುಕೊಳ್ಳುವುದಿಲ್ಲ. ಕಾನೂನು ರೂಪಿಸಿ. ಕಾನೂನಿನ ಅಡಿಯಲ್ಲಿ ನ್ಯಾಯಯುತವಾಗಿ ಕೆಲಸ ಮಾಡುತ್ತೇವೆ. ನಂಬಿಕೆ, ಭರವಸೆ ಮತ್ತು ಗೌರವ ಇಟ್ಟುಕೊಂಡು ನಮ್ಮ ಭವಿಷ್ಯವನ್ನು ನಿಮ್ಮ ಕೈಯಲ್ಲಿ ಇಡುತ್ತಿದ್ದೇವೆ. ನಮ್ಮ ಜೀವನೋಪಾಯವನ್ನು ಕಸಿದುಕೊಳ್ಳುವ ಕೆಲಸ ಮಾತ್ರ ಮಾಡಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.