ಬೆಂಗಳೂರು: ಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ವೆಂಕಟಲಕ್ಷ್ಮಿ (26) ಎಂಬುವರನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿದ್ದು, ಈ ಸಂಬಂಧ ಪತಿ ಸುರೇಶ್ನನ್ನು (32) ಪೊಲೀಸರು ಬಂಧಿಸಿದ್ದಾರೆ.
‘ತಮಿಳುನಾಡಿನ ಸುರೇಶ್, ಟೇಲರಿಂಗ್ ಕೆಲಸ ಮಾಡುತ್ತಿದ್ದ. ಪತ್ನಿ ವೆಂಕಟಲಕ್ಷ್ಮಿ ಹಾಗೂ ನಾಲ್ಕು ವರ್ಷದ ಗಂಡು ಮಗುವಿನ ಜೊತೆ ಹೊಂಗಸಂದ್ರದ ಶ್ರೀನಿವಾಸ್ ಲೇಔಟ್ನಲ್ಲಿ ವಾಸವಿದ್ದ’ ಎಂದು ಪೊಲೀಸರು ಹೇಳಿದರು.
‘ಜೂನ್ 7ರಂದು ದಂಪತಿ ಮದ್ಯದ ಪಾರ್ಟಿ ಮಾಡಿದ್ದರು. ಕುಡಿದ ಅಮಲಿನಲ್ಲೇ ಜಗಳ ಆರಂಭಿಸಿದ್ದರು. ’ನನ್ನ ಜೀವನವನ್ನೇ ನೀನು ಹಾಳು ಮಾಡಿದಿ. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತಿಲ್ಲ’ ಎಂದು ಪತ್ನಿ ವೆಂಕಟಲಕ್ಷ್ಮಿ ದೂರಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸುರೇಶ್, ಕೊಠಡಿಗೆ ಹೋಗಿ ಮಲಗಿದ್ದರು.’
‘ತಡರಾತ್ರಿ 1 ಗಂಟೆ ಸುಮಾರಿಗೆ ಸುರೇಶನ ಜೊತೆ ವೆಂಕಟಲಕ್ಷ್ಮಿ ಪುನಃ ಜಗಳ ತೆಗೆದಿದ್ದರು. ಅದೇ ಸಂದರ್ಭದಲ್ಲೇ ಸುರೇಶ್, ಚಾಕುವಿನಿಂದ ಪತ್ನಿಯ ಕತ್ತು ಕೊಯ್ದಿದ್ದ. ಸ್ಥಳದಲ್ಲೇ ಒದ್ದಾಡಿ ವೆಂಕಟಲಕ್ಷ್ಮಿ ಮೃತಪಟ್ಟಿದ್ದರು’ ಎಂದು ಪೊಲೀಸರು ಹೇಳಿದರು.
‘ಪತ್ನಿಯೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪಿ ಸುರೇಶ್ ಪೊಲೀಸರಿಗೆ ಸುಳ್ಳು ಹೇಳಿದ್ದ. ಮರಣೋತ್ತರ ಪರೀಕ್ಷೆ ವರದಿ ಬಂದಾಗ ಇದೊಂದು ಕೊಲೆ ಎಂಬುದು ತಿಳಿಯಿತು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದು ತಿಳಿಸಿದರು.
ಮಗು ಅನಾಥ: ಸುರೇಶ್ ಹಾಗೂ ವೆಂಕಟಲಕ್ಷ್ಮಿ ಪರಸ್ಪರ ಪ್ರೀತಿಸಿ 6 ವರ್ಷಗಳ ಹಿಂದೆ ಮದುವೆ ಆಗಿದ್ದರು. ಪತ್ನಿಯನ್ನು ಕೊಂದ ಪತಿ ಇದೀಗ ಜೈಲು ಸೇರಿದ್ದಾನೆ. ದಂಪತಿಯ ಗಂಡು ಮಗು ಅನಾಥವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.