ADVERTISEMENT

ಚಳಿ, ಹವಾಮಾನ ವೈಪರೀತ್ಯ: ಅನಾರೋಗ್ಯ, ತೀವ್ರ ಉಸಿರಾಟದ ಸಮಸ್ಯೆ ಶೇ 15ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 4:40 IST
Last Updated 29 ಡಿಸೆಂಬರ್ 2022, 4:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಚಳಿ ಹಾಗೂ ಹವಾಮಾನ ವೈಪರೀತ್ಯದಿಂದ ನಗರದಲ್ಲಿ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಹಾಗೂತೀವ್ರ ಉಸಿರಾಟದ ಸಮಸ್ಯೆ (ಸಾರಿ) ಪ್ರಕರಣಗಳು ಶೇ 15ರಷ್ಟು ಹೆಚ್ಚಳವಾಗಿವೆ.

ಈ ಸಮಸ್ಯೆ ಎದುರಿಸುತ್ತಿರುವವರಿಗೆ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯಲ್ಲಿ (ಆರ್‌ಜಿಐಸಿಡಿ)ಚಿಕಿತ್ಸೆ ಒದಗಿಸಲಾಗುತ್ತಿದೆ. ಐಎಲ್‌ಐ, ಸಾರಿ ಸಮಸ್ಯೆ ಇರುವವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಸಂಸ್ಥೆಗೆ ಪ್ರತಿನಿತ್ಯ 200ಕ್ಕೂ ಅಧಿಕ ಹೊರರೋಗಿಗಳು ಭೇಟಿ ನೀಡುತ್ತಿದ್ದು, ಅವರಲ್ಲಿ ಶೇ 50ರಷ್ಟು ಮಂದಿ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರೇ ಆಗಿದ್ದಾರೆ.

ಸಂಸ್ಥೆಯಲ್ಲಿ ನಡೆಸಲಾಗುತ್ತಿರುವ ಕೋವಿಡ್ ಪರೀಕ್ಷೆಗಳಲ್ಲಿ ಪ್ರತಿನಿತ್ಯ ಒಂದೆರಡು ಕೋವಿಡ್ ಪ್ರಕರಣಗಳು ದೃಢಪಡುತ್ತಿವೆ. ಸೋಂಕಿತರಾದವರಿಗೆ200 ಹಾಸಿಗೆಗಳ ಮೇಕ್‌ ಶಿಫ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತದೆ.

ADVERTISEMENT

ಕೋವಿಡ್ ಹೆಚ್ಚಳವಿಲ್ಲ: ‘ಚಳಿಗಾಲದ ಅವಧಿಯಲ್ಲಿ ವಾತಾವರಣದಲ್ಲಿ ತೇವಾಂಶ ಇರುವುದರಿಂದ ಐಎಲ್‌ಐ, ಸಾರಿ ಪ್ರಕರಣಗಳು ಸಹಜವಾಗಿ ಹೆಚ್ಚಳವಾಗುತ್ತವೆ. ಪ್ರತಿ ವರ್ಷ ಈ ವೇಳೆ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ವರದಿಯಾಗುತ್ತವೆ. ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳವಾಗಿಲ್ಲ. ಕೊರೊನಾ ಸೋಂಕು ತಗುಲಿದವರಿಗೂ ತೀವ್ರತೆ ಕಡಿಮೆ ಇರುವುದರಿಂದ ವಿಶೇಷ ಚಿಕಿತ್ಸೆ ಇಲ್ಲದೆಯೇ ಚೇತರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಆತಂಕಪಡುವ ಅಗತ್ಯವಿಲ್ಲ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ. ನಾಗರಾಜ್ ತಿಳಿಸಿದರು.

‘ಚೀನಾದಲ್ಲಿ ಲಸಿಕಾಕರಣ ಸರಿಯಾದ ರೀತಿಯಲ್ಲಿ ನಡೆದಿರಲಿಲ್ಲ. ಕೋವಿಡ್ ನಿಯಮಾವಳಿಯೂ ಸಮರ್ಪಕವಾಗಿ ಅಲ್ಲಿ ಪಾಲನೆಯಾಗಿಲ್ಲ. ಇದರಿಂದಾಗಿ ಅಲ್ಲಿ ಪ್ರಕರಣಗಳು ಹೆಚ್ಚಿ, ವೈರಾಣು ಜೀವಕ್ಕೆ ಅಪಾಯವನ್ನು ತಂದೊಡ್ಡಿತು. ನಮ್ಮಲ್ಲಿ ಲಸಿಕಾಕರಣ ಉತ್ತಮವಾಗಿ ನಡೆದಿದ್ದರಿಂದ ಪ್ರತಿಕಾಯಗಳು ಅಭಿವೃದ್ಧಿ ಹೊಂದಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.