ADVERTISEMENT

ಬೆಂಗಳೂರು | 16 ಬಾರಿ ಇರಿದು ಯುವತಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 2:54 IST
Last Updated 1 ಮಾರ್ಚ್ 2023, 2:54 IST
ಲೀಲಾ ಪವಿತ್ರಾ
ಲೀಲಾ ಪವಿತ್ರಾ   

ಬೆಂಗಳೂರು: ಜೀವನ್‌ಬಿಮಾನಗರ ಠಾಣೆ ವ್ಯಾಪ್ತಿಯಲ್ಲಿ ಲೀಲಾ ಪವಿತ್ರಾ (25) ಎಂಬುವರನ್ನು ಚಾಕುವಿನಿಂದ 16 ಬಾರಿ ಇರಿದು ಕೊಲೆ ಮಾಡಲಾಗಿದ್ದು, ಈ ಸಂಬಂಧ ಆರೋಪಿ ದಿನಕರ್ (28) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶದ ಲೀಲಾ ಪವಿತ್ರಾ, ಎಂ.ಎಸ್ಸಿ ಪದವೀಧರೆ. ಮುರುಗೇಶಪಾಳ್ಯದ ಲ್ಯಾಬೋರೇಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಸಂಜೆ ಕೆಲಸ ಮುಗಿಸಿ ಕಚೇರಿಯಿಂದ ಹೊರಬಂದಾಗ ಅವರ ಮೇಲೆ ಆರೋಪಿ ದಾಳಿ ಮಾಡಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿ ದಿನಕರ್, ಆಂಧ್ರಪ್ರದೇಶದವ. ದೊಮ್ಮಲೂರು ಬಳಿಯ ಲ್ಯಾಬೋರೇಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಲೀಲಾ ಪವಿತ್ರಾ ಹಾಗೂ ದಿನಕರ್, ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲು ತೀರ್ಮಾನಿಸಿದ್ದರು. ಆದರೆ, ಜಾತಿ ಬೇರೆ ಬೇರೆಯಾಗಿದ್ದರಿಂದ ಮದುವೆಗೆ ಯುವತಿ ಕಡೆಯವರು ಒಪ್ಪಿರಲಿಲ್ಲ’ ಎಂದು ತಿಳಿಸಿದರು.

ADVERTISEMENT

‘ದಿನಕರ್ ಜೊತೆ ಮಾತನಾಡದಂತೆ ಪೋಷಕರು ಯುವತಿಗೆ ತಾಕೀತು ಮಾಡಿದ್ದರು. ಹೀಗಾಗಿ, ಯುವತಿ ಆರೋಪಿಯಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದ್ದರು. ಸಿಟ್ಟಾದ ಆರೋಪಿ, ಲೀಲಾ ಪವಿತ್ರಾ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.’

‘ಚಾಕು ಸಮೇತ ಕಚೇರಿ ಬಳಿ ಬಂದಿದ್ದ. ಲೀಲಾ ಪವಿತ್ರಾ ಅವರು ಕಚೇರಿಯಿಂದ ಹೊರಬರುತ್ತಿದ್ದಂತೆ ಮಾತುಕತೆ ನೆಪದಲ್ಲಿ ಆರೋಪಿ ಅಡ್ಡಗಟ್ಟಿದ್ದ. ಇದೇ ಸಂದರ್ಭದಲ್ಲಿ ಹೊಟ್ಟೆಗೆ ಚಾಕು ಇರಿದಿದ್ದ. ನಂತರ, ಎದೆ, ಕುತ್ತಿಗೆ ಸೇರಿ ದೇಹದ 16 ಕಡೆ ಚಾಕು ಇರಿದಿದ್ದ. ತೀವ್ರ ರಕ್ತಸ್ರಾವದಿಂದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.