ADVERTISEMENT

ಮಹಿಳೆ ಹತ್ಯೆ; ಪತಿಯೇ ಆರೋಪಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 16:35 IST
Last Updated 5 ಆಗಸ್ಟ್ 2020, 16:35 IST

ಬೆಂಗಳೂರು: ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಸೋಮವಾರ ತಡರಾತ್ರಿ ನಡೆದಿದ್ದ ಸಂಧ್ಯಾ (27) ಎಂಬುವರನ್ನು ಕೊಲೆ ಸಂಬಂಧ ಪತಿ ನಾಗೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

‘ಸಪ್ತಗಿರಿ ಲೇಔಟ್ ನಿವಾಸಿ ನಾಗೇಶ್ (30), ತನ್ನ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಇದೊಂದು ಹಣ ಹಾಗೂ ಚಿನ್ನಾಭರಣಕ್ಕಾಗಿ ಬೇರೆಯವರು ಎಸಗಿರುವ ಕೃತ್ಯವೆಂದು ಬಿಂಬಿಸಿ ಪೊಲೀಸರ ದಿಕ್ಕು ತಪ್ಪಿಸಲು ಯುತ್ನಿಸಿದ್ದ. ಆದರೆ, ಮನೆ ಬಳಿಯ ಸಿ.ಸಿ.ಟಿ.ವಿ ಕ್ಯಾಮೆರಾದಿಂದ ಆತ ಸಿಕ್ಕಿಬಿದ್ದ’ ಎಂದು ಪೊಲೀಸರು ಹೇಳಿದರು.

‘ಆಂಧ್ರಪ್ರದೇಶ ಚಿತ್ತೂರಿನ ನಾಗೇಶ್ ಮತ್ತು ಸಂಧ್ಯಾ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗಾರೆ ಕೆಲಸ ಮಾಡುತ್ತಿದ್ದ ನಾಗೇಶ್, ಮಹಿಳೆಯೊಬ್ಬರ ಜೊತೆ ಸಲುಗೆ ಇಟ್ಟುಕೊಂಡಿದ್ದ. ಈ ವಿಚಾರ ಸಂಧ್ಯಾ ಅವರಿಗೆ ಗೊತ್ತಾಗಿತ್ತು. ಆ ವಿಚಾರಕ್ಕೆ ದಂಪತಿ ನಡುವೆ ನಿತ್ಯ ಜಗಳವಾಗುತ್ತಿತ್ತು. ಪತ್ನಿಯನ್ನು ಕೊಲೆ ಮಾಡಲು ನಾಗೇಶ್ ಸಂಚು ರೂಪಿಸಿದ್ದ’

ADVERTISEMENT

‘ಸೋಮವಾರ ಸಂಜೆ 5.30ರ ಸುಮಾರಿಗೆ ನಾಗೇಶ್‌, ತನ್ನೂರಿಗೆ ಹೋಗುವುದಾಗಿ ಪತ್ನಿಗೆ ಹೇಳಿ ಹೋಗಿದ್ದ. ಸಂಧ್ಯಾ ಹಾಗೂ ಮಕ್ಕಳು ಮನೆಯಲ್ಲಿ ಮಲಗಿದ್ದರು. ತಡರಾತ್ರಿ ಮನೆಗೆ ಬಂದಿದ್ದ ನಾಗೇಶ್, ಪತ್ನಿಯ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿದ್ದ. ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.