ADVERTISEMENT

ಮಹಿಳಾ ಭಾವನೆಗಳ ತಾಕಲಾಟಕ್ಕೆ ಚಿತ್ರರೂಪ

ಗಮನ ಸೆಳೆದ ವರ್ಣಚಿತ್ರ ಮತ್ತು ಛಾಯಾಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 18:45 IST
Last Updated 1 ಡಿಸೆಂಬರ್ 2022, 18:45 IST
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಗುರುವಾರ ‘ಅಸ್ಮಿತೆ’ ಸಂಸ್ಥೆ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನದಲ್ಲಿ ಮಹಿಳೆಯರು ವಿಜಯಲಕ್ಷ್ಮಿ ಅವರ ಸೇಫ್ಟಿಪಿನ್‌ ಕಲಾಕೃತಿ ವೀಕ್ಷಿಸಿದರು.     –ಪ್ರಜಾವಾಣಿ ಚಿತ್ರ.
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಗುರುವಾರ ‘ಅಸ್ಮಿತೆ’ ಸಂಸ್ಥೆ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನದಲ್ಲಿ ಮಹಿಳೆಯರು ವಿಜಯಲಕ್ಷ್ಮಿ ಅವರ ಸೇಫ್ಟಿಪಿನ್‌ ಕಲಾಕೃತಿ ವೀಕ್ಷಿಸಿದರು.     –ಪ್ರಜಾವಾಣಿ ಚಿತ್ರ.   

ಬೆಂಗಳೂರು: ತನ್ನೊಳಗಿನ ಮನಸ್ಸಿನ ಭಾವನೆಯ ತಾಕಲಾಟ, ಸಮಾಜ ವಿಧಿಸಿರುವ ಕಟ್ಟುಪಾಡುಗಳನ್ನು ಸದ್ದಿಲ್ಲದೇ ಕಿತ್ತೊಗೆಯುವ ಮನಃಸ್ಥಿತಿಗಳನ್ನೇ ಚಿತ್ರಗಳಾಗಿ ರೂಪಿಸಿದ್ದಾರೆ ಮೂವರು ಕಲಾವಿದ ಸ್ನೇಹಿತೆಯರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದಶೈಲಜಾ. ಎನ್. ಗಿರಿಧರ್, ಟಿ.ಎಸ್. ಶಶಿಕಲಾ, ವಿಜಯಲಕ್ಷ್ಮಿ ಸೆಂಥಿಲ್ ಕುಮಾರ್ ಅವರ ವರ್ಣಚಿತ್ರ ಮತ್ತು ಛಾಯಾಚಿತ್ರಗಳ ಪ್ರದರ್ಶನ ‘ಅಸ್ಮಿತೆ’ಯಲ್ಲಿ ಸ್ನೇಹಿತೆಯರ ಬದುಕು–ಭಾವನೆಗಳು ಅನಾವರಣಗೊಂಡಿವೆ.

ಕೌಟುಂಬಿಕ ಚೌಕಟ್ಟಿನಲ್ಲೇ ಬಾಲ್ಯ, ಯೌವನವನ್ನು ಕಳೆದವಿಜಯಲಕ್ಷ್ಮಿ ಅವರು 26ನೇ ವಯಸ್ಸಿಗೆ ತಂದೆ–ತಾಯಿ ಹೊರತಾದ ಹೊರಜಗತ್ತಿಗೆ ತೆರೆದುಕೊಂಡಾಗ ಸಮಾಜದ ಕ್ರೌರ್ಯವನ್ನು ಕಂಡು ಬೆಚ್ಚಿದ್ದರು. ಇಂತಹ ಸಮಯದಲ್ಲಿ ತಮ್ಮ ರಕ್ಷಣೆಗೆ ಕಂಡುಕೊಂಡ ಆಯುಧ ಸೇಫ್ಟಿಪಿನ್‌. ಅದೇ ಸೇಫ್ಟಿಪಿನ್‌ ಬಳಸಿಕೊಂಡು ಅವರು ಮಹಿಳೆಯ ವಿವಿಧ ಭಂಗಿಗಳನ್ನು ಚಿತ್ರಿಸಿದ್ದಾರೆ. ಮಕ್ಕಳ ಜತೆಗಿನ ಆಟ, ಬೇಸರದ ನೋಟ, ಆತ್ಮಹತ್ಯೆ ಮತ್ತಿತರ ಸಂದರ್ಭಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.

ADVERTISEMENT

ಮೈಸೂರಿನ ಸಂಸ್ಥೆಯೊಂದರಲ್ಲಿ ಶಿಕ್ಷಕಿಯಾಗಿರುವಶೈಲಜಾ ಅವರು ಒಬ್ಬ ಮಹಿಳೆಯಾಗಿ ಚಿತ್ರಗಳ ಮೂಲಕ ತನ್ನನ್ನು ತಾನು ಸಮಾಜಕ್ಕೆ ಪರಿಚಯಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಪ್ರಕೃತಿ, ದೈವ, ಪ್ರೀತಿ ಮತ್ತಿತರ ಹೃದಯಕ್ಕೆ ಹತ್ತಿರವಾದ ಸಂಗತಿಗಳು ಚಿತ್ರಗಳ ರೂಪ ಪಡೆದಿವೆ.

ಕೆಸರಿನಲ್ಲಿ ಅರಳಿದರೂ ಕಲ್ಮಶವಿಲ್ಲದೇ ಗಮನ ಸೆಳೆಯುವ ಕಮಲದ ಹೂಶಶಿಕಲಾ ಅವರ ಪ್ರತಿರೂಪ. ಕಮಲವನ್ನೇ ಮುಖ್ಯ ವಿಷಯವಾಗಿ ಇಟ್ಟುಕೊಂಡ ಅವರು ವಿಭಿನ್ನ ಕಲಾಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರೀಯ ಪುಷ್ಪಕ್ಕೆ ದೈವತ್ವದ ಸ್ವರೂಪ ನೀಡಿದ್ದಾರೆ.

ಚಿತ್ರಕಲಾ ಪ್ರದರ್ಶನಕ್ಕೆ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಚಾಲನೆ ನೀಡಿ
ದರು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌.ಶಶಿಧರ, ಕಲಾವಿದ ಪ್ರೊ.ಕೆ.ಎಸ್.ಅಪ್ಪಾಜಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.