ADVERTISEMENT

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪರಿಸರ ದಿನ: ಸಸಿ ನೆಟ್ಟು ನೀರುಣಿಸಿದ ಮುಖ್ಯ ನ್ಯಾಯಮೂರ್ತಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 20:26 IST
Last Updated 5 ಜೂನ್ 2023, 20:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶ್ವ ಪರಿಸರ ದಿನವನ್ನು ಸೋಮವಾರ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ಹಾಗೂ ನ್ಯಾಯಮೂರ್ತಿ ಕೆ. ಸೋಮಶೇಖರ್, ಕಾರಾಗೃಹದ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿದರು.

ನಂತರ, ಕಾರಾಗೃಹದಲ್ಲಿರುವ ಬೇಕರಿ ಹಾಗೂ ಅಡುಗೆ ಕೊಠಡಿಗೆ ಭೇಟಿ ನೀಡಿ ಪರಿಶೀಲಿಸಿದರು. ಕೈದಿಗಳಿಗೆ ಉದ್ಯೋಗ ತರಬೇತಿ ನೀಡುವ ಉದ್ದೇಶದಿಂದ ಜೈಲಿನಲ್ಲಿ ಆರಂಭಿಸಿರುವ ಅಡಿಕೆ ತಟ್ಟೆ ತಯಾರಿಕೆ ಘಟಕವನ್ನು ಉದ್ಘಾಟಿಸಿದರು.

ADVERTISEMENT

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ಮಾತನಾಡಿ, ‘ಪರಿಸರವನ್ನು ನಾವು ಹಸಿರಾಗಿಡಬೇಕು. ಇಂದು ಸಸಿ ನೆಟ್ಟರೆ, ಭವಿಷ್ಯದಲ್ಲಿ ಉಪಯೋಗವಾಗುತ್ತದೆ’ ಎಂದರು.

‘ಮರಗಳನ್ನು ಕತ್ತರಿಸಿ ತಯಾರಿಸುವ ಕಾಗದ ಹಾಗೂ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ನಿತ್ಯವೂ 400 ಟನ್‌ನಷ್ಟು ಪ್ಲಾಸ್ಟಿಕ್ ನಮ್ಮ ಪರಿಸರ ಸೇರುತ್ತಿದೆ. ಕಾಗದ ಮತ್ತು ಪ್ಲಾಸ್ಟಿಕ್‌ನಿಂದ ತಯಾರಿಸುವ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಬೇಕು’ ಎಂದು ಹೇಳಿದರು.

‘ಜೈಲಿನ ಕೈದಿಗಳು, ಉದ್ಯೋಗದ ಕೌಶಲ ಬೆಳೆಸಿಕೊಳ್ಳಬೇಕು. ಜೈಲಿನ ಬೇಕರಿ ಉತ್ಪನ್ನಗಳು ಹಾಗೂ ಬಟ್ಟೆಗಳ ಗುಣಮಟ್ಟ ಚೆನ್ನಾಗಿದೆ. ಇವುಗಳಿಗೆ ಕರ್ನಾಟಕ ಪ್ರಿಸನ್ಸ್ (ಕೆ.ಪಿ) ಬ್ರ್ಯಾಂಡ್‌ ಹೆಸರಿಡಲಾಗಿದೆ. ಇಲ್ಲಿಂದಲೇ, ಶಾಲಾ ಮಕ್ಕಳಿಗೆ ಬಿಳಿ ಅಂಗಿ ಹಾಗೂ ಇತರೆ ಬಟ್ಟೆಗಳನ್ನು ಪೂರೈಸುವ ಕೆಲಸವಾದರೆ ಖುಷಿಯಾಗುತ್ತದೆ’ ಎಂದರು.

ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್‌ಕುಮಾರ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಎಡಿಜಿಪಿ ಮನೀಶ್ ಕರ್ಬಿಕರ್, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್. ರಮೇಶ್, ಅಧೀಕ್ಷಕ ಮಲ್ಲಿಕಾರ್ಜುನ್ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.