ಬೆಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ ರಾಜಾಜಿನಗರದ ಸೇಂಟ್ ಥೆರೆಸಾ ತಥಾಗತ್ ಹಾರ್ಟ್ ಕೇರ್ ಸೆಂಟರ್ ಸೋಮವಾರ ವಾಕಥಾನ್ ಆಯೋಜಿಸಿತ್ತು.
‘ಆರೋಗ್ಯವಂತ ಹೃದಯಕ್ಕಾಗಿ ನಾಲ್ಕು ಹೆಜ್ಜೆ’ ಎಂಬ ಧ್ಯೇಯದೊಂದಿಗೆ ಆರಂಭವಾದ ವಾಕಥಾನ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ವಾಕಥಾನ್ನಲ್ಲಿ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಸಂಘ, ಸಂಸ್ಥೆಯ ಪ್ರತಿನಿಧಿಗಳು, ಸಾರ್ವಜನಿಕರು, ಯುವ ಜನಾಂಗ ಮತ್ತು ಆಸ್ಪತ್ರೆಯ ಸಿಬ್ಬಂದಿ ಸೆರಿದಂತೆ ನೂರಾರು ಜನರು ಹೆಜ್ಜೆ ಹಾಕಿದರು.
‘ಹೃದಯದ ಆರೋಗ್ಯಕ್ಕಾಗಿ ನಿತ್ಯ ನಾಲ್ಕು ಹೆಜ್ಜೆ ಹಾಕಿ’ ಎಂಬ ಘೋಷಣೆಗಳು ದಾರಿಯುದ್ದಕ್ಕೂ ಮೊಳಗಿದವು. ಹೃದಯದ ಆರೋಗ್ಯ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಫಲಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
‘ಒತ್ತಡದ ಜೀವನಶೈಲಿ ಹೃದಯ ಕಾಯಿಲೆಗಳಿಗೆ ರಹದಾರಿ. ಒತ್ತಡ, ಆತಂಕ, ಖಿನ್ನತೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ನೆಮ್ಮದಿಯ ಜೀವನಶೈಲಿ ರೂಪಿಸಿಕೊಂಡರೆ ಆರೋಗ್ಯವಂತ ಬದುಕು ನಮ್ಮದಾಗುತ್ತದೆ’ ಎಂದು ದಿನೇಶ್ ಗುಂಡೂರಾವ್ ಕಿವಿಮಾತು ಹೇಳಿದರು.
ಜೀವನಶೈಲಿಯಲ್ಲಿ ಮಾಡಿಕೊಳ್ಳುವ ಸಣ್ಣಪುಟ್ಟ ಬದಲಾವಣೆ ಹೃದಯ ಮತ್ತು ಜೀವನವನ್ನು ಜೋಪಾನವಾಗಿಡುತ್ತದೆ. ಹೃದಯ ಕಾಯಿಲೆಗೆ ಈ ಮೊದಲಿನಂತೆ ವಯಸ್ಸಿನ ಇತಿಮಿತಿಗಳಿಲ್ಲ. ಯಾವುದೇ ವಯಸ್ಸಿನವರಿಗಾದರೂ ಗಂಭೀರ ಹೃದಯ ಕಾಯಿಲೆ ಕಾಣಿಸಿಕೊಳ್ಳಬಹುದು ಎಂದು ತಥಾಗತ್ ಹಾರ್ಟ್ ಕೇರ್ ಸೆಂಟರ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಮಹಾಂತೇಶ ಆರ್. ಚರಂತಿಮಠ ಎಚ್ಚರಿಕೆ ನೀಡಿದರು.
ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ. ಗೋಪಾಲಯ್ಯ, ಎಂ.ಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ವೀಣಾ ಮಹಾಂತೇಶ, ತಥಾಗತ್ ಹಾರ್ಟ್ ಕೇರ್ ಸೆಂಟರ್ ನಿರ್ದೇಶಕ ಡಾ.ಶ್ರೀನಿವಾಸ್ ವೇಲು, ಅರುಣಾ ಮಠದಪಾಟೀಲ ಹೆಜ್ಜೆ ಹಾಕಿದರು.
ಕಾರ್ಡಿಯಾಲಜಿ ಸೊಸೈಟಿ ಆಫ್ ಇಂಡಿಯಾ, ಭಾರತೀಯ ಉದ್ಯೋಗ ಸಂಸ್ಥೆ ಕರ್ನಾಟಕ ಶಾಖೆ, ಬಸವ ಬಳಗ, ರೋಟರಿ ಕ್ಲಬ್ ಮುಂತಾದ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ವಾಕಥಾನ್ ಆಯೋಜಿಸಲಾಗಿತ್ತು.
ವಾಕಥಾನ್ನಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಉಚಿತವಾಗಿ ಹೃದಯ, ದೇಹದಲ್ಲಿನ ಕೊಬ್ಬಿನಾಂಶ, ರಕ್ತ ತಪಾಸಣೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ ತಪಾಸಣೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.