ADVERTISEMENT

ರಸ್ತೆಯಲ್ಲೇ ಹೂಳು : ಪಾದಚಾರಿ ದಾರಿ ಹಾಳು

​ಪ್ರಜಾವಾಣಿ ವಾರ್ತೆ
Published 19 ಮೇ 2019, 16:19 IST
Last Updated 19 ಮೇ 2019, 16:19 IST
ರಸ್ತೆಯಲ್ಲೇ ಹಾಕಿರುವ ಹೂಳು ಹಾಗೂ ಪಾದಚಾರಿ ಮಾರ್ಗ ಹಾಳಾಗಿರುವುದು
ರಸ್ತೆಯಲ್ಲೇ ಹಾಕಿರುವ ಹೂಳು ಹಾಗೂ ಪಾದಚಾರಿ ಮಾರ್ಗ ಹಾಳಾಗಿರುವುದು   

ಯಲಹಂಕ: ಜಿಕೆವಿಕೆ ತಿರುವಿನಿಂದ ಜಕ್ಕೂರಿಗೆ ಸಂಪರ್ಕ ಕಲ್ಪಿಸುವ ಜೋಡಿರಸ್ತೆ ಬದಿಯ ಚರಂಡಿಗಳಿಂದ ತೆಗೆದ ಹೂಳನ್ನು ರಸ್ತೆ ಬದಿಯೇ ಹಾಕಲಾಗಿದೆ. ಇದರಿಂದ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ತೊಂದರೆ ಆಗುತ್ತಿದೆ.

ಕಿರಿದಾಗಿರುವ ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ತ್ಯಾಜ್ಯವನ್ನು ರಸ್ತೆ ಪಕ್ಕ ಸುರಿದಿರುವುದರಿಂದ ರಸ್ತೆಯ ಅಗಲ ಮತ್ತಷ್ಟು ಕಿರಿದಾಗಿದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಜಿಕೆವಿಕೆ ಪ್ರಯಾಣಿಕರ ತಂಗುದಾಣದಿಂದ ಜಕ್ಕೂರಿನ ಬಡಾವಣೆಗಳಿಗೆ ತೆರಳುವ ಜನರು ಈ ಪಾದಚಾರಿ ಮಾರ್ಗವನ್ನೇ ಬಳಸುತ್ತಾರೆ. ಹೂಳನ್ನು ತೆಗೆಯಲು ತೆರವು ಮಾಡಲಾಗಿದ್ದಚರಂಡಿಯ ಸ್ಲ್ಯಾಬ್‌ಗಳನ್ನು ಮರುಜೋಡಣೆ ಮಾಡಿಲ್ಲ. ಇದರಿಂದ ಪಾದಚಾರಿ ಮಾರ್ಗದಲ್ಲಿ ಹೊಂಡಗಳು ಸೃಷ್ಟಿಯಾಗಿವೆ.

ADVERTISEMENT

ಜನರು ರಸ್ತೆ ಮೇಲೆ ನಡೆದರೆ ‘ವಾಹನಗಳು ಬಂದು ಗುದ್ದುವ ಭಯದಲ್ಲಿ’, ಪಾದಚಾರಿ ಮಾರ್ಗದ ಮೇಲೆ ನಡೆದರೆ ‘ಹೊಂಡದಲ್ಲಿ ಬೀಳುವ’ ಭಯದಲ್ಲಿದ್ದಾರೆ. ರಾತ್ರಿ ವೇಳೆ ಇಲ್ಲಿ ನಡೆದುಕೊಂಡು ಹೋಗುವುದಂತೂ ಬಹಳ ದುಸ್ಥರವಾಗಿದೆ.

‘ಕೆಲವರು ಈ ಮಾರ್ಗದಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಇದಕ್ಕೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’ ಎಂದು ಸ್ಥಳೀಯರಾದ ಕುಮಾರ್‌ ಆರೋಪಿಸಿದರು.

‘ಸಂಬಂಧಪಟ್ಟವರು ಇತ್ತ ಗಮನಹರಿಸಿ ಹೂಳನ್ನು ತೆರವು ಮಾಡಬೇಕು. ಪಾದಚಾರಿ ಮಾರ್ಗದಲ್ಲಿ ಸ್ಲ್ಯಾಬ್‌ಗಳನ್ನು ಜೋಡಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.