ಯಲಹಂಕ: ಉಪನಗರದ ಮದರ್ ಡೇರಿ ವೃತ್ತದ ಸಮೀಪದಲ್ಲಿರುವ ಉದ್ಯಾನಕ್ಕೆ ‘ಮಹಾಯೋಗಿ ವೇಮನ ಉದ್ಯಾನ’ ಎಂದು ನಾಮಕರಣ ಮಾಡಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಎಸ್.ಆರ್.ವಿಶ್ವನಾಥ್, ‘ಮಹಾನ್ ಪುರುಷರು ಹಾಗೂ ದಾರ್ಶನಿಕರ ಹೆಸರುಗಳು ಜನಮಾನಸದಲ್ಲಿ ಚಿರಕಾಲ ಉಳಿಯಬೇಕೆಂಬ ಉದ್ದೇಶದಿಂದ ಯಲಹಂಕದ ಪ್ರತಿಯೊಂದು ಉದ್ಯಾನಗಳಿಗೆ ಅವರ ಹೆಸರುಗಳನ್ನು ಇಡಲಾಗಿದೆ. ಅದೇ ರೀತಿ ವೇಮನರು ಸಹ ಸಮಾಜದಲ್ಲಿ ಸಮಾನತೆಯ ಸಂದೇಶ ಸಾರುವ ಮೂಲಕ ಕ್ರಾಂತಿಕಾರಕ ಬದಲಾವಣೆಗೆ ಕೊಡುಗೆ ನೀಡಿದ್ದಾರೆ. ಅವರ ಹೆಸರನ್ನು ಉದ್ಯಾನಕ್ಕೆ ಇಡುವ ಮೂಲಕ ಗೌರವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.
ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಮಾತನಾಡಿ, ‘ವೇಮನರು ಕೇವಲ ಒಂದು ಜಾತಿ-ಧರ್ಮಕ್ಕೆ ಸೀಮಿತವಾಗಿರದೆ, ಬಸವಣ್ಣನವರ ನಂತರ ಸಮಾಜದಲ್ಲಿ ಎಲ್ಲರೂ ಒಂದೇ ಎನ್ನುವುದನ್ನು ಸಾರಿ ಹೇಳುವ ಮೂಲಕ ಸಮಾನತೆಗಾಗಿ ಕೊಡುಗೆ ನೀಡುವಲ್ಲಿ ಅವರ ಪಾತ್ರ ದೊಡ್ಡದು. ಅಂತಹ ಮಹಾಪುರುಷರ ಹೆಸರನ್ನು ಉದ್ಯಾನಕ್ಕೆ ನಾಮಕರಣ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.