ಬೆಂಗಳೂರು: ಯಶವಂತಪುರ ರೈಲು ನಿಲ್ದಾಣವನ್ನು ‘ಸಿಟಿ ಸೆಂಟರ್’ ಆಗಿ ನವೀಕರಿಸುವ ಕಾಮಗಾರಿ ಆರಂಭವಾಗಿದ್ದು, 2025ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ.
ಅಂಗವಿಕಲರಸ್ನೇಹಿ, ಹಸಿರು ಕಟ್ಟಡದೊಂದಿಗೆ ಭವಿಷ್ಯದ ವಿನ್ಯಾಸದಲ್ಲಿ ರೂಪುಗೊಳ್ಳುವ ರೈಲು ನಿಲ್ದಾಣವನ್ನು ಬೆಂಗಳೂರಿನ ಆಕರ್ಷಕ ತಾಣವನ್ನಾಗಿಸಲಾಗುತ್ತದೆ. ಪ್ರಯಾಣಿಕರಿಗೆ ಇದು ಹಿತಾನುಭವ ನೀಡಲಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗ್ಡೆ ತಿಳಿಸಿದರು.
ಯಶವಂತಪುರ ರೈಲು ನಿಲ್ದಾಣವನ್ನು ₹380 ಕೋಟಿ ವೆಚ್ಚದಲ್ಲಿ ನವೀಕರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಇದೇ ವರ್ಷ ಜೂ.20ರಂದು ಚಾಲನೆ ನೀಡಿದ್ದರು. ಗಿರ್ಧಾರಿಲಾಲ್ ಕನ್ಸ್ಟ್ರಕ್ಷನ್ ಈ ಕಾಮಗಾರಿಯನ್ನು ನಿರ್ವಹಿಸುತ್ತಿದ್ದು, ಪ್ರಥಮ ಹಂತದ ಕಾಮಗಾರಿ ಆರಂಭವಾಗಿದೆ. ಈ ಯೋಜನೆ ಟರ್ನ್ ಕೀ ಮಾದರಿಯದ್ದಾಗಿದೆ.
ನವೀಕರಣಗೊಂಡ ರೈಲು ನಿಲ್ದಾಣ ‘ಸಿಟಿ ಸೆಂಟರ್’ ಆಗಿ ಕಾರ್ಯನಿರ್ವಹಿಸಲಿದ್ದು, ಆಗಮನ ಮತ್ತು ನಿರ್ಗಮನಕ್ಕೆ ತಲಾ 216 ಮೀಟರ್ಗಳಷ್ಟು ಅಗಲವಾದ ಪ್ರತ್ಯೇಕ ದ್ವಾರಗಳ ವ್ಯವಸ್ಥೆ ಇರಲಿದೆ. ರೂಫ್ ಪ್ಲಾಜಾದಲ್ಲಿ ಮಳಿಗೆ, ಫುಡ್ ಕೋರ್ಟ್, ಮನರಂಜನಾ ತಾಣಗಳಿರಲಿವೆ. ನಿಲ್ದಾಣದ ಆವರಣದಲ್ಲಿ ಎಲ್ಇಡಿ ಆಧಾರಿತ ಸೂಚನಾ ಫಲಕಗಳನ್ನು ಹಾಕಲಾಗುತ್ತದೆ. ಬಹುಅಂತಸ್ತಿನ ಕಾರು ಪಾರ್ಕಿಂಗ್ ಇರಲಿದೆ. ಮೆಟ್ರೊ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಅನೀಸ್ ಮಾಹಿತಿ ನೀಡಿದರು.
‘ಇದೀಗ ಪ್ರತಿನಿತ್ಯ 50 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದು, ನವೀಕರಣಗೊಂಡ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ಜನರು ಸಂಚರಿಸಲು ಅನುಕೂಲವಾಗಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.