ADVERTISEMENT

ಜೊಮ್ಯಾಟೊ ಪ್ರಕರಣ: ರಾಜ್ಯ ತೊರೆದ ಗ್ರಾಹಕಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 17:05 IST
Last Updated 17 ಮಾರ್ಚ್ 2021, 17:05 IST
ಗ್ರಾಹಕಿ ಹಿತೇಶಾ ಇಂದ್ರಾಣಿ
ಗ್ರಾಹಕಿ ಹಿತೇಶಾ ಇಂದ್ರಾಣಿ   

ಬೆಂಗಳೂರು: ಜೊಮ್ಯಾಟೊ ಕಂಪನಿ ಡೆಲಿವರಿ ಬಾಯ್ ಜೊತೆಗಿನ ಜಗಳ ಪ್ರಕರಣದಲ್ಲಿ ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಗ್ರಾಹಕಿ ಹಿತೇಶಾ ಇಂದ್ರಾಣಿ ಅವರು ರಾಜ್ಯ ತೊರೆದಿದ್ದಾರೆ.

‘ಆಹಾರ ಪೂರೈಸಲು ಬಂದಿದ್ದ ಡೆಲಿವರಿ ಬಾಯ್ ಕಾಮರಾಜ್ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿ ವಸ್ತ್ರ ವಿನ್ಯಾಸಕಿ ಹಿತೇಶಾ ಇಂದ್ರಾಣಿ ದೂರು ನೀಡಿದ್ದರು. ಆರೋಪ ನಿರಾಕರಿಸಿದ್ದ ಡೆಲಿವರಿ ಬಾಯ್ ಕಾಮರಾಜ್, ‘ಗ್ರಾಹಕಿ ಇಂದ್ರಾಣಿ ಅವರೇ ನನ್ನ ಮೇಲೆ ಚಪ್ಪಲಿ ಎಸೆದು ಹಲ್ಲೆ ಮಾಡಿದ್ದಾರೆ’ ಎಂದು ಪ್ರತಿ ದೂರು ನೀಡಿದ್ದರು.

ಎರಡೂ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಕಾಮರಾಜ್‌ ಅವರನ್ನು ಬಂಧಿಸಿ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಹಿತೇಶಾ ಇಂದ್ರಾಣಿ ಅವರನ್ನು ವಿಚಾರಣೆ ನಡೆಸಲು ಪ್ರಯತ್ನಿಸುತ್ತಿದ್ದು, ಅವರು ಮಾತ್ರ ಕೈಗೆ ಸಿಗುತ್ತಿಲ್ಲ.

ADVERTISEMENT

‘ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದ ಹಿತೇಶಾ ಇಂದ್ರಾಣಿ ರಾಜ್ಯವನ್ನು ತೊರೆದು ಮಹಾರಾಷ್ಟ್ರಕ್ಕೆ ಹೋಗಿದ್ದಾರೆ. ವಿಚಾರಣೆಗಾಗಿ ನೋಟಿಸ್ ನೀಡಿದರೂ ಠಾಣೆಗೆ ಬರುತ್ತಿಲ್ಲ. ಆ ಬಗ್ಗೆ ಪ್ರಶ್ನಿಸಿದ್ದಕ್ಕೆ, ‘ನಾನು ಮಹಾರಾಷ್ಟ್ರದಲ್ಲಿರುವ ಸಂಬಂಧಿ ಮನೆಗೆ ಬಂದಿದ್ದೇನೆ. ಸದ್ಯಕ್ಕೆ ವಿಚಾರಣೆಗೆ ಬರಲು ಆಗುವುದಿಲ್ಲ’ ಎಂದಷ್ಟೇ ಹೇಳಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.