ಔರಾದ್: ತಾಲ್ಲೂಕಿನ ಜನರ ಬಹು ವರ್ಷಗಳ ಬೇಡಿಕೆ ನಂತರ ಕೊನೆಗೂ ಇಲ್ಲಿಯ ಕಿರಿಯ ದರ್ಜೆ ಸಿವಿಲ್ ನ್ಯಾಯಾಲಯಕ್ಕೆ ಹಿರಿಯ ದರ್ಜೆ ಸ್ಥಾನಮಾನ ಸಿಕ್ಕಿದೆ.
ಜಿಲ್ಲಾ ಸತ್ರ ನ್ಯಾಯಾಧೀಶ ಡಾ. ಶಶಿಕಲಾ ಅವರು ಸೋಮವಾರ ಹಿರಿಯ ಶ್ರೇಣಿ ನ್ಯಾಯಾಲಯದ ಕಲಾಪಕ್ಕೆ ವಿಧುಕ್ತವಾಗಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಸರ್ವರಿಗೂ ಸಮಾನ ನ್ಯಾಯ ಸಿಗಬೇಕು. ಮತ್ತು ಜನರ ಮನೆ ಬಾಗಿಲಿಗೆ ನ್ಯಾಯದಾನ ಸಿಗಬೇಕೆಂಬ ಉದ್ದೇಶದಿಂದ ಔರಾದ್ ತಾಲ್ಲೂಕಿನ ಜನರಿಗೆ ಹಿರಿಯ ಶ್ರೇಣಿ ನ್ಯಾಯದಾನ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಸ್ಥಳೀಯ ನ್ಯಾಯಾಧೀಶ ವೆಂಕಟೇಶ್ವರ ಮಾತನಾಡಿ, ಜನರಿಗೆ ಸರಳ ಮತ್ತು ಸುಲಭವಾಗಿ ನ್ಯಾಯ ಸಿಗುವಂತಾಗಲು ಅನೇಕ ಕಾರ್ಯಕ್ರಮಗಳು ಹಾಕಿಕೊಳ್ಳಲಾಗಿದೆ ಎಂದರು. ನ್ಯಾಯವಾದಿ ಸಂಘದ ಅಧ್ಯಕ್ಷ ಎಂ.ಎಸ್. ಬುಟ್ಟೆ ಮಾತನಾಡಿ, ಜಿಲ್ಲೆಯ ಎಲ್ಲ ತಾಲ್ಲೂಕಿಗೆ ಹಿರಿಯ ಶ್ರೇಣಿ ನ್ಯಾಯದಾನ ಸೌಲಭ್ಯ ಇದ್ದರೂ ನಮ್ಮಲ್ಲಿ ಇಲ್ಲ ಎಂಬ ಕೊರಗು ಇತ್ತು. ಜಿಲ್ಲೆಯ ಹಿರಿಯ ನ್ಯಾಯಾಧೀಶರ ಸಹಕಾರದಿಂದ ನಮಗೆ ಈ ಸೌಲಭ್ಯ ದಕ್ಕಿದೆ ಎಂದು ಹೇಳಿದರು.
ಇಲ್ಲಿ ಪದೇ ಪದೇ ಖಾಲಿ ಇರುವ ನ್ಯಾಯಾಧೀಶರ ಹುದ್ದೆ ತುಂಬಲು ಮತ್ತು ಹಿರಿಯ ಶ್ರೇಣಿ ನ್ಯಾಯಾಲಯ ಸೌಲಭ್ಯಕ್ಕಾಗಿ ನಿರಂತರ ಪ್ರಯತ್ನ ಮಾಡಿದ ಹಿರಿಯ ನ್ಯಾಯವಾದಿ ಎಚ್.ಆರ್. ಪಾಟೀಲ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ವಕೀಲ ರಾಜಕುಮಾರ ಮಿತ್ರಾ ಸ್ವಾಗತಿಸಿದರು. ರಮೇಶ ಅಲ್ಮಾಜೆ ವಂದಿಸಿದರು. ರಾಜೇಂದ್ರ ಜಾಧವ್ ನಿರೂಪಿಸಿದರು.
ಇನ್ನು ಮುಂದೆ ಇಲ್ಲಿಯ ನ್ಯಾಯಾಲದಯಲ್ಲಿ ಸದ್ಯಕ್ಕೆ ಸೋಮವಾರ ಮತ್ತು ಮಂಗಳವಾರ ಎರಡು ದಿನ ಹಿರಿಯ ಶ್ರೇಣಿ ನ್ಯಾಯಾಲಯದ ಕಲಾಪ ನಡೆಯಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.