ಹುಮನಾಬಾದ್: ವಿಜಯದಶಮಿ ಪ್ರಯುಕ್ತ ಕಳೆದ ಒಂಭತ್ತು ದಿನಹಿಂದೆ ತಾಯಿ ಅಂಬಾಭವಾನಿ ಹೆಸರಲ್ಲಿ ಪ್ರತಿಷ್ಟಾಪಿಸಿದ್ದ ಘಟಸ್ಥಾಪನೆ ಭಕ್ತರ ಹರಕೆಯೊಂದಿಗೆ ಗುರುವಾರ ತೆರೆಕಂಡಿತು.
ಅಮಾವಾಸ್ಯೆ ಮಾರನೆದಿನ ಘಟಸ್ಥಾಪಿಸುವ ಹಿನ್ನೆಲೆಯಲ್ಲಿ ಒಂದುವಾರ ಮುಂಚಿತವಾಗಿ ಮನೆಯನ್ನು ಸ್ವಚ್ಛಗೊಳಿಸಿ, ಸುಣ್ಣಬಣ್ಣಗಳಿಂದ ಅಲಂಕರಿಸಿ, ಮನೆಯಲ್ಲಿನ ಚೂರುಪಾರು ಬಟೆಗಳೆಲ್ಲವನ್ನು ತೊಳೆದು ಒಂದೆಡೆ ಇಡಲಾಗುತ್ತದೆ.
ಘಟನೆ ಸ್ಥಾಪನೆ ದಿನ ಎಲ್ಲ ಬಾಗಿಲುಗಳನ್ನು ಕಬ್ಬು, ತಳಿರು, ತೋರಣಗಳಿಂದ ಅಲಂಕರಿಸಲಾಗುತ್ತದೆ. ಘಟನೆ ಸ್ಥಾಪನೆಗೆ ಅಗತ್ಯವಿರುವ ಹುತ್ತದ ಮಣ್ಣನ್ನು ತಂದು ಒಂಭತ್ತು ನಮೂನೆಯ ಧಾನ್ಯ ಬೀಜಗಳನ್ನು ವಿಶೇಷ ಪೂಜೆ ಸಲ್ಲಿಸಿ, ಮಣ್ಣಲ್ಲಿ ಬೆರೆಸಲಾಗುತ್ತದೆ. ಒಂಭತ್ತುದಿನ ನಿರಂತರ ಹಗಲು - ರಾತ್ರಿ ಪೂಜೆ ಸಲ್ಲಿಸುವುದರ ಜೊತೆಗೆ ದೀಪವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಆರಂದಂತೆ ಎಚ್ಚರಿಕೆಯಿಂದ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಮಹಿಳೆಯರ ಮೇಲೆ ಇರುತ್ತದೆ.
ಅಂತಿಮ ದಿನ ವಿಶೇಷ ನೈವೇದ್ಯದೊಂದಿಗೆ ಅಂಬಾಭವಾನಿ ದೇವಸ್ಥಾನಕ್ಕೆ ತೆರಳಿ, ಹೊತ್ತ ವಿವಿಧ
ಹರಕೆಗಳನ್ನು ತೀರಿಸುತ್ತಾರೆ. ಸಂಪ್ರದಾಯದಂತೆ ಮೇಲಿನ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ
ಪರಸ್ಪರ ಬನ್ನಿಬಂಗಾರ ವಿನಿಮಯ ಮಾಡಿಕೊಳ್ಳುತ್ತಾರೆ. ಅಂತೆಯೇ ಬನ್ನಿಬಂಗಾಯ ವಿನಿಮಯ ಮಾಡಿಕೊಳ್ಳುವ ಸಂಬಂಧ ನಗರದಲ್ಲಿ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪಕ್ಷತಾತೀತವಾಗಿ ಪರಸ್ಪರ ಬನ್ನಿಬಂಗಾರ ವಿನಿಮಯ ಮಾಡಿಕೊಳ್ಳುತ್ತಿರುವುದು ವಿಶೇಷವಾಗಿತ್ತು.
ವಿಶೇಷ ಆಕರ್ಷಣೆ: ನಗರ ಬಾಲಾಜಿ ದೇವಸ್ಥಾನ ಬಳಿ ಪ್ರತಿವರ್ಷದಂತೆ ಈ ವರ್ಷವೂ ಸ್ಥಾಪಿಸಲಾಗಿದ್ದ ರಾವಳನ ಬೃಹತ್ ಪ್ರತಿಕೃತಿ ಮಕ್ಕಳು, ಹಿರಿಯರು ಪ್ರತಿಯೊಬ್ಬರ ಆಕರ್ಷಣೀಯ ಕೇಂದ್ರವಾಗಿತ್ತು. ಅದೇ ಕಾರಣಕ್ಕಾಗಿ ಬೆಳಿಗ್ಗೆಯಿಂದ ಸಂಜೆ 5ಗಂಟೆವರೆಗೂ ಬಾಲಾಜಿ ದೇವಸ್ಥಾನಬಳಿ ಭಾರೀ ಸಂಖ್ಯೆಯ ಜನ ನೆರೆದಿರುವುದು ಕಂಡುಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.