ಬಸವಕಲ್ಯಾಣ: ತಾಲ್ಲೂಕಿನ ಚಂಡಿಕಾಪುರದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಆಟ, ಅಧ್ಯಯನದ ಜತೆಗೆ ಸಾಂಸ್ಕೃತಿಕ ಚಟುವಟಿಕೆಯಲ್ಲೂ ಮುಂದಿದ್ದಾರೆ. ರಾಷ್ಟ್ರೀಯ ಹಬ್ಬಗಳಲ್ಲಿ ಇಲ್ಲಿ ನಡೆಯುವ ಕಾರ್ಯಕ್ರಮ ವೀಕ್ಷಿಸಲು ಇಡೀ ಗ್ರಾಮವೇ ಸೇರಿರುತ್ತದೆ.
ಶಾಲಾ ಆವರಣದ ಪರಿಸರ ಹಸಿರುಮಯವಾಗಿದೆ. ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ. ಕಂಪ್ಯೂಟರ್ ಆಪರೇಟರ್ ಹುದ್ದೆ ಖಾಲಿಯಿದ್ದರೂ ಅನ್ಯ ಶಿಕ್ಷಕರಿಂದ ನಿರಂತರವಾಗಿ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಆಟದ ಸಾಮಗ್ರಿಗಳಿದ್ದು, ಎಲ್ಲದರಲ್ಲೂ ಶಿಸ್ತು ಎದ್ದು ಕಾಣುತ್ತದೆ.
`2005 ರಿಂದ 2013ರವರೆಗೆ ಇಲ್ಲಿನ ವಿದ್ಯಾರ್ಥಿಗಳು ಪ್ರತಿವರ್ಷ ಸತತವಾಗಿ ರಾಜ್ಯಮಟ್ಟಕ್ಕೆ ಆಯ್ಕೆ ಗೊಂಡಿದ್ದರು. ದೈಹಿಕ ಶಿಕ್ಷಕರ ಹುದ್ದೆ ಖಾಲಿಯಿರುವುದರಿಂದ ಈಚೆಗೆ ಸ್ವಲ್ಪ ಹಿನ್ನಡೆಯಾದರೂ ನಿರಂತರ ಕ್ರೀಡಾ ಚಟುವಟಿಕೆಗಳು ನಡೆಯುತ್ತಿವೆ.
ಎಸ್ಸೆಸ್ಸೆಲ್ಸಿಯಲ್ಲಿ 2014 ರಲ್ಲಿ ಶೇ 98 ಫಲಿತಾಂಶ ಬಂದಿತ್ತು ನಂತರ ಎರಡು ವರ್ಷಗಳಿಂದ ಶೇ 90 ಕ್ಕಿಂತ ಹೆಚ್ಚಿನ ಫಲಿತಾಂಶ ಬಂದಿದೆ. ಬೆಳಿಗ್ಗೆ ಮತ್ತು ಸಂಜೆ ವಿಶೇಷ ಬೋಧನೆ ನೆಡಸಲಾಗುತ್ತಿದೆ. ಮಾಸಿಕ ಪರೀಕ್ಷೆ, ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿ ಫಲಿತಾಂಶ ಹೆಚ್ಚಳಕ್ಕೆ ಪ್ರಯತ್ನಿಸಲಾಗುತ್ತಿದೆ’ ಎಂದು ಮುಖ್ಯ ಶಿಕ್ಷಕ ಶಿವಾಜಿರಾವ ಮಾಲಿಪಾಟೀಲ ತಿಳಿಸಿದ್ದಾರೆ.
‘ಕನ್ನಡ ವಿಷಯದಲ್ಲಿ 7 ವರ್ಷಗಳಿಂದ ಮತ್ತು ಇಂಗ್ಲಿಷ್ ನಲ್ಲಿ ಮೂರು ವರ್ಷಗಳಿಂದ ಶೇ 100 ಫಲಿತಾಂಶ ಬರುತ್ತಿದೆ’ ಎಂದು ಶಿಕ್ಷಕರಾದ ತಿರಕೇಶ ಭಜಂತ್ರಿ, ಮೋಹನ ಕೇರೆ ಹೇಳಿದರು.
‘ಪ್ರತಿವರ್ಷ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಯೋಜಿಸಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗುತ್ತದೆ. ಇಕೋ ಕ್ಲಬ್, ವಿಜ್ಞಾನ ಕ್ಲಬ್ ಗಳಿವೆ. ಜಿಲ್ಲಾಮಟ್ಟದ ವಸ್ತು ಪ್ರದರ್ಶನದಲ್ಲಿಯೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು’ ಎಂದು ಶಿಕ್ಷಕಿ ಸಂಗೀತಾಗಿರಿ ಹೇಳಿದರು.
`ವಿದ್ಯಾರ್ಥಿಗಳು ಸಸಿ ನೆಟ್ಟು, ಸಂರಕ್ಷಣೆ ಮಾಡುತ್ತಾರೆ. ವಿದ್ಯಾರ್ಥಿ ಸಂಸತ್ ಕೂಡ ಸ್ಥಾಪಿಸಲಾಗಿದೆ’ ಎಂದು ಶರಣಬಸಪ್ಪ ಕಿಲಾರಹಟ್ಟಿ ತಿಳಿಸಿದ್ದಾರೆ. `ವೃತ್ತಿಶಿಕ್ಷಣ ಮಾರ್ಗದರ್ಶನ ಕೇಂದ್ರವಿದ್ದು ಕರಕುಶಲ ಕಲಾ ಪ್ರದರ್ಶನವೂ ಆಯೋಜಿಸಲಾಗುತ್ತದೆ’ ಎಂದು ವೈಜನಾಥ ಮೇತ್ರೆ ಹೇಳಿದ್ದಾರೆ.
`ಓಟ, ಉದ್ದ ಜಿಗಿತ, ರೀಲೆಯಲ್ಲಿ ಶುಭಾಂಗಿ, ಜ್ಯೋತಿ ಥೋಂಟೆ, ಕವಿತಾ, ದಗಡು, ಸಂದೀಪ, ಸಂತೋಷ, ಶಾಹುರಾಜ, ಶಿವಾಜಿ, ರೇಣುಕಾ, ಪ್ರೇಮದಾಸ ಒಳಗೊಂಡು 48 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದರು’ ಎಂದು ತಾಲ್ಲೂಕು ದೈಹಿಕ ಪರಿವೀಕ್ಷಕ ಶಿವಕುಮಾರ ಜಡಗೆ ಮಾಹಿತಿ ನೀಡಿದ್ದಾರೆ.
* *
ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದರು. ಶಿಕ್ಷಕರ ಪ್ರಯತ್ನ, ಗ್ರಾಮಸ್ಥರ ಸಹಕಾರದಿಂದ ಶಾಲೆ ಅಭಿವೃದ್ಧಿ ಕಾಣುತ್ತಿದೆ
ಶಿವಕುಮಾರ ಜಡಗೆ
ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ<
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.