ADVERTISEMENT

ವಾರ್ಡ್‌ಗೆ ಶಾಸಕರ ಭೇಟಿ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 9:09 IST
Last Updated 3 ಮಾರ್ಚ್ 2014, 9:09 IST

ಬಸವಕಲ್ಯಾಣ: ತಾಲ್ಲೂಕಿನ ಈಶ್ವರ­ನಗರ, ಕೈಕಾಡಿ ಗಲ್ಲಿ ಮತ್ತು ಪಾರಧಿ ಓಣಿಗಳಿಗೆ ಶಾಸಕ ಮಲ್ಲಿಕಾರ್ಜುನ ಖೂಬಾ ಶನಿವಾರ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಪಾರಧಿಗಲ್ಲಿ ಇಳಿಜಾರು ಪ್ರದೇಶ­ದಲ್ಲಿ ಇರುವ ಕಾರಣ ನಗರದ ಚರಂಡಿ ನೀರು ನಿಲ್ಲುತ್ತಿದೆ. ಹೀಗಾಗಿ ಎಲ್ಲೆಡೆ ಹೊಲಸು ವಾತಾವರಣ ಇದೆ. ಆದರೂ ನಗರಸಭೆಯವರು ಸ್ವಚ್ಛತೆಗಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ದೂರಿದರು.

ಸಮರ್ಪಕ ಕುಡಿಯುವ ನೀರು  ಸರಬರಾಜಾಗುತ್ತಿಲ್ಲ. ನಲ್ಲಿಯ ಬಳಿ ಚರಂಡಿಯ ಹೊಲಸು ನೀರು ಹರಿ­ಯುತ್ತಿದೆ. ಈ ಬಗ್ಗೆ ನಗರಸಭೆ ಆಯುಕ್ತ­ರಿಗೆ ಮನವಿ ಸಲ್ಲಿಸಿದರೂ ಗಮನ ನೀಡುತ್ತಿಲ್ಲ ಎಂದು ಓಣಿ ನಿವಾಸಿಗಳು ದೂರಿದರು. ಇಲ್ಲಿನ ವ್ಯವಸ್ಥೆಯನ್ನು ಶೀಘ್ರ ಬಗೆಹರಿಸಬೇಕು ಎಂದು ಸಿಕಂದರ ಪಾರಧಿ ಒತ್ತಾಯಿಸಿದರು.

ವಾರ್ಡ್ ಅಭಿವೃದ್ಧಿಗಾಗಿ ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ₨20 ಲಕ್ಷ ಮಂಜೂರು ಮಾಡಲಾಗಿದೆ. ಈ ಹಣದಲ್ಲಿ  ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಮಲ್ಲಿಕಾರ್ಜುನ ಖೂಬಾ ಭರವಸೆ ನೀಡಿದರು.

ಕೈಕಾಡಿ ಮಹಾರಾಜ ಭವನ ಮತ್ತು ಪಾರಧಿ ಗಲ್ಲಿಯಲ್ಲಿ ಭವಾನಿ ಮಂದಿರ ನಿರ್ಮಾಣಕ್ಕೆ ₨50 ಸಾವಿರ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ತಹಶೀಲ್ದಾರ್‌ ಡಿ.ಎಂ.ಪಾಣಿ, ಮುಖಂಡರಾದ ಕೇಶಪ್ಪ ಬಿರಾದಾರ, ಶಬ್ಬೀರಪಾಶಾ ಮುಜಾವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.