ಬೀದರ್: ಹಳೆಯ ವೈಷಮ್ಯದಿಂದ ಒಂದೇ ಸಮುದಾಯದ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದ ಘಟನೆ ನಗರದಲ್ಲಿ ಗುರುವಾರ ನಡೆದಿದೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಫೆರೋಜ್ಖಾನ್ ಅವರ ಸಹೋದರ ಹಾಗೂ ಮಕ್ಕಳನ್ನು ಒಳಗೊಂಡ ಗುಂಪು ಮತ್ತು ಮಹಮ್ಮದ್ ರೌಫ್ ಗುಂಪಿನ ಮಧ್ಯೆ ಗಲಾಟೆ ನಡೆದಿದೆ.
ಫೆರೋಜ್ಖಾನ್ ಅವರ ಪುತ್ರರು ಹಾಗೂ ಪೊಲೀಸ್ ಇಲಾಖೆಯಿಂದ ನಿವೃತ್ತರಾದ ಮಹ್ಮಮದ್ ಗೌಸೊದ್ದಿನ್ ಅವರ ಪುತ್ರ ಮಹಮ್ಮದ್ ರೌಫ್ ಮಧ್ಯೆ ಅನೇಕ ದಿನಗಳಿಂದ ಜಗಳ ನಡೆದಿತ್ತು. ಅದು ನ್ಯಾಯಾಲಯಕ್ಕೂ ತಲುಪಿತ್ತು. ಮಹಮ್ಮದ್ ಗೌಸೊದ್ದಿನ್ ಅವರು ತಮ್ಮ ಪುತ್ರನನ್ನು ಬೀದರ್ನಿಂದ ದೂರ ಕಳಿಸಿದ್ದರು. ಆದರೆ, ಅವರು ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಬೀದರ್ಗೆ ಬಂದಿದ್ದರು ಎಂದು ಹೇಳಲಾಗಿದೆ.
ಅಂಬೇಡ್ಕರ್ ವೃತ್ತದಲ್ಲಿ ಗುಂಪುಗಳ ಮಧ್ಯೆ ವಾಗ್ವಾದ ಶುರುವಾಗಿದೆ. ಕೋಟೆ ಸಮೀಪ ಜಗಳ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ಮಹಮ್ಮದ್ ರೌಫ್ ಅವರು ಗಾಯಗೊಂಡಿದ್ದು, ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲೂ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಗಂಭೀರವಾಗಿ ಗಾಯಗೊಂಡ ರೌಫ್ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.