ADVERTISEMENT

9 ಅಂಚೆ ಶಾಖೆಗಳಿಂದ ಶೇ 100 ಸಾಧನೆ

ಸಂಪೂರ್ಣ ಅಂಚೆ ವಿಮೆ, ಬಚತ್, ಸುಕನ್ಯಾ ಸಮೃದ್ಧಿ ಗ್ರಾಮಗಳ ಘೋಷಣೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2018, 15:25 IST
Last Updated 5 ಸೆಪ್ಟೆಂಬರ್ 2018, 15:25 IST
ಹುಮನಾಬಾದ್ ತಾಲ್ಲೂಕಿನ ಮದರಗಾಂವ್‌ನಲ್ಲಿ ನಡೆದ ಜಿಲ್ಲಾಮಟ್ಟದ ಗ್ರಾಮೀಣ ಅಂಚೆ ಜೀವ ವಿಮೆ ಕಾರ್ಯಕ್ರಮದಲ್ಲಿ ಅಂಚೆ ಯೋಜನೆಗಳ ಅನುಷ್ಠಾನದಲ್ಲಿ ಶೇ 100 ರಷ್ಟು ಸಾಧನೆ ಮಾಡಿದ ಅಂಚೆ ಶಾಖೆಗಳ ಅಂಚೆ ಪಾಲಕರಾದ ಜ್ಯೋತಿ, ಶಿವರಾಜ, ಹಣಮಂತಪ್ಪ, ಗೌತಮ, ಸೈಯದ್ ಫರೀದ್, ಬಾಲಸಿಂಗ್, ರೋಹನ್ ಹಾಗೂ ಪದ್ಮಿನಿ ಅವರನ್ನು ಸನ್ಮಾನಿಸಲಾಯಿತು
ಹುಮನಾಬಾದ್ ತಾಲ್ಲೂಕಿನ ಮದರಗಾಂವ್‌ನಲ್ಲಿ ನಡೆದ ಜಿಲ್ಲಾಮಟ್ಟದ ಗ್ರಾಮೀಣ ಅಂಚೆ ಜೀವ ವಿಮೆ ಕಾರ್ಯಕ್ರಮದಲ್ಲಿ ಅಂಚೆ ಯೋಜನೆಗಳ ಅನುಷ್ಠಾನದಲ್ಲಿ ಶೇ 100 ರಷ್ಟು ಸಾಧನೆ ಮಾಡಿದ ಅಂಚೆ ಶಾಖೆಗಳ ಅಂಚೆ ಪಾಲಕರಾದ ಜ್ಯೋತಿ, ಶಿವರಾಜ, ಹಣಮಂತಪ್ಪ, ಗೌತಮ, ಸೈಯದ್ ಫರೀದ್, ಬಾಲಸಿಂಗ್, ರೋಹನ್ ಹಾಗೂ ಪದ್ಮಿನಿ ಅವರನ್ನು ಸನ್ಮಾನಿಸಲಾಯಿತು   

ಬೀದರ್: ಅಂಚೆ ಇಲಾಖೆಯು ಜಿಲ್ಲೆಯ ಏಳು ಗ್ರಾಮಗಳನ್ನು ಸಂಪೂರ್ಣ ಅಂಚೆ ವಿಮೆ ಗ್ರಾಮ, ತಲಾ ಮೂರು ಗ್ರಾಮಗಳನ್ನು ಸಂಪೂರ್ಣ ಬಚತ್ ಹಾಗೂ ಸಂಪೂರ್ಣ ಸುಕನ್ಯಾ ಸಮೃದ್ಧಿ ಗ್ರಾಮಗಳನ್ನಾಗಿ ಘೋಷಣೆ ಮಾಡಿದೆ.

ಹುಮನಾಬಾದ್ ತಾಲ್ಲೂಕಿನ ಮದರಗಾಂವ್ ಗ್ರಾಮದಲ್ಲಿ ನಡೆದ ಜಿಲ್ಲಾಮಟ್ಟದ ಗ್ರಾಮೀಣ ಅಂಚೆ ಜೀವ ವಿಮೆ ಕಾರ್ಯಕ್ರಮದಲ್ಲಿ ಧಾರವಾಡದ ಉತ್ತರ ಕರ್ನಾಟಕ ವಲಯ ಅಂಚೆ ಸೇವೆಗಳ ನಿರ್ದೇಶಕ ಸಣ್ಣಾ ನಾಯಕ್ ಈ ಘೋಷಣೆ ಮಾಡಿದರು.

ಮದರಗಾಂವ್, ಅಹಮದಾಬಾದ್, ಚಿಕನಾಗಾಂವ್, ಕೊಟಗ್ಯಾಳ, ಹಾರಕೂಡ, ರಾಯಪಳ್ಳಿ ಹಾಗೂ ಮದರಗಿ ಗ್ರಾಮಗಳನ್ನು ಸಂಪೂರ್ಣ ಅಂಚೆ ವಿಮೆ ಗ್ರಾಮಗಳನ್ನಾಗಿ, ಮದರಗಾಂವ್, ಖೇರ್ಡಾ(ಬಿ) ಹಾಗೂ ಅಹಮದಾಬಾದ್ ಗ್ರಾಮಗಳನ್ನು ಸಂಪೂರ್ಣ ಬಚತ್ ಗ್ರಾಮಗಳನ್ನಾಗಿ ಮತ್ತು ಮದರಗಾಂವ್, ಅಹಮದಾಬಾದ್ ಹಾಗೂ ಸೊನಾಳ ಗ್ರಾಮಗಳನ್ನು ಸಂಪೂರ್ಣ ಸುಕನ್ಯಾ ಸಮೃದ್ಧಿ ಗ್ರಾಮಗಳನ್ನಾಗಿ ಘೋಷಿಸಿದರು.

ADVERTISEMENT

ಅಂಚೆ ಯೋಜನೆಗಳ ಅನುಷ್ಠಾನದಲ್ಲಿ ಶೇ 100 ರಷ್ಟು ಸಾಧನೆಗೈದ ಒಂಬತ್ತು ಅಂಚೆ ಶಾಖೆಗಳ ಅಂಚೆ ಪಾಲಕರಾದ ಶಿವರಾಜ, ಹಣಮಂತಪ್ಪ, ಪದ್ಮಿನಿ, ಗೌತಮ, ಸೈಯದ್ ಫರೀದ್, ಬಾಲಸಿಂಗ್, ಜ್ಯೋತಿ ಹಾಗೂ ರೋಹನ್ ಅವರನ್ನು ಸನ್ಮಾನಿಸಿದರು.
‘ಬಹುತೇಕ ಗ್ರಾಮಗಳಲ್ಲಿ ಅಂಚೆ ಶಾಖೆಗಳು ಇವೆ. ಗ್ರಾಮೀಣ ಜನ ಅಂಚೆ ಸೇವೆಗಳ ಲಾಭ ಪಡೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಹತ್ತು ವರ್ಷದ ಒಳಗಿನ ಎಲ್ಲ ಹಣ್ಣುಮಕ್ಕಳ ಸುಕನ್ಯಾ ಸಮೃದ್ಧಿ ಖಾತೆ ತೆರೆದು ಅವರ ಭವಿಷ್ಯ ಸುಭದ್ರಗೊಳಿಸಬೇಕು. ಜೀವನದಲ್ಲಿ ಅನಿರೀಕ್ಷಿತ ಅಪಘಾತಗಳಿಂದ ರಕ್ಷಣೆ ಪಡೆಯಲು ಅಂಚೆ ಜೀವ ವಿಮೆ ಪಾಲಿಸಿ ಮಾಡಿಸಬೇಕು’ ಎಂದು ಸಲಹೆ ಮಾಡಿದರು.
ಬೀದರ್ ಅಂಚೆ ವಿಭಾಗದ ಅಧೀಕ್ಷಕ ಕೆ. ದಿನಕರ್, ‘ಅಂಚೆ ಪಾಲಕರು ಇಲಾಖೆಯ ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜಶೇಖರ ಪಾಟೀಲ ಮಾತನಾಡಿದರು. ಅಂಚೆ ನಿರೀಕ್ಷಕರಾದ ಲಕ್ಷ್ಮೀಕಾಂತ, ಮಲ್ಲಿಕಾರ್ಜುನ, ವಿಜಯಪುರ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಶ್ರೀನಿಧಿ ಕೆ. ಉಪಸ್ಥಿತರಿದ್ದರು. ಅಂಚೆ ಪಾಲಕ ರಘುನಾಥ ಸ್ವಾಗತಿಸಿದರು. ಮಂಗಲಾ ಭಾಗವತ ನಿರೂಪಿಸಿದರು. ನಾಗಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.