ಔರಾದ್: ತಾಲ್ಲೂಕಿನ ಕೌಠಾ(ಕೆ)-ವಡಗಾಂವ್ ಮುಖ್ಯ ರಸ್ತೆಯಲ್ಲಿ ಬರುವ ಆಲೂರ(ಕೆ) ಬಳಿ ಸೇತುವೆ ತಡೆಗೋಡೆ ಭಾಗಶಃ ಹಾನಿಗೊಳಗಾಗಿದ್ದು, ಪ್ರಯಾಣಿಕರಲ್ಲಿ ಆತಂಕ ಆವರಿಸಿದೆ.
ತಡೆಗೋಡೆ ಎರಡೂ ಭಾಗದ ಕಂಬಗಳು ಕಿತ್ತು ಹೋಗಿವೆ. ಇದರಿಂದ ರಸ್ತೆ ಬದಿ ಹೋಗುವ ಬೈಕ್ ಸವಾರರು ಹಾಗೂ ಪಾದಚಾರಿಗಳಲ್ಲಿ ಆತಂಕ ಮನೆ ಮಾಡಿದೆ. ಕಳೆದ ತಿಂಗಳು ಇಲ್ಲಿ ಎರಡು ಆಕಳು ಬಿದ್ದಿದ್ದು, ಜನ ಅವುಗಳ ರಕ್ಷಣೆ ಮಾಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೌಠಾ(ಕೆ)-ವಡಗಾಂವ್ ನಡುವಿನ 12 ಕಿ.ಮೀ. ಹಾಳಾದ ರಸ್ತೆ ಹಾಗೂ ತಡೆಗೋಡೆ ರಿಪೇರಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಭಾಗದಲ್ಲಿ ಓಡಾಡುವ ಅನೇಕ ಗ್ರಾಮಗಳ ಜನರು ತೊಂದರೆ ಎದುರಿಸುತ್ತಿದ್ದಾರೆ. ಎರಡು ವರ್ಷಗಳಿಂದ ರಸ್ತೆ ಮೇಲೆ ಗುಂಡಿಗಳು ಬಿದ್ದರೂ, ಕನಿಷ್ಠ ಮುಚ್ಚುವ ಕೆಲಸ ಮಾಡುತ್ತಿಲ್ಲ ಎಂದು ಸ್ಥಳೀಯ ಯುವಕ ಸಂಜುಕುಮಾರ ಬೇಲೂರ ಅಸಮಾಧಾನ ಹೊರ ಹಾಕಿದ್ದಾರೆ.
‘ನಾವು ಸಮಸ್ಯೆ ಹೇಳಿಕೊಳ್ಳಲು ಲೋಕೋಪಯೋಗಿ ಕಚೇರಿಗೆ ಹೋದರೆ ಅಲ್ಲಿ ಅಧಿಕಾರಿಗಳು ಇರುವುದಿಲ್ಲ. ಇನ್ನು ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಹೀಗಾಗಿ ಅವರ ವಿರುದ್ಧ ನಾವು ಹೋರಾಟ ಮಾಡಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.
ಕೌಠಾದಿಂದ ವಡಗಾಂವ್ ರಸ್ತೆ ತೆಲಂಗಾಣಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಅದರ ವ್ಯಾಪ್ತಿಯಲ್ಲಿ ಹತ್ತಾರು ಗ್ರಾಮಗಳು ಬರುತ್ತವೆ. ಈ ಊರಿನ ವಿದ್ಯಾರ್ಥಿಗಳು ಶಾಲೆ ಕಾಲೇಜಿಗೆ ಹೋಗಿ ಬರಲು ತುಂಬಾ ಸಮಸ್ಯೆಯಾಗಿದೆ. ಹೀಗಾಗಿ ತಕ್ಷಣ ಗುಂಡಿ ಮುಚ್ಚುವ ಕೆಲಸ ಮಾಡುವಂತೆ ಆಲೂರ, ಬೇಲೂರ, ಪಾಶಾಪೂರ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.