ಬೀದರ್: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ನೌಕರರು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಅಹೋರಾತ್ರಿ ಧರಣಿ ಆರಂಭಿಸಿದರು.
ಸುಮಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರೂ ಯೋಗ್ಯ ಗೌರವಧನ ಕೊಡುತ್ತಿಲ್ಲ ಎಂದು ಆಪಾದಿಸಿದರು.
ರಾಜ್ಯದಲ್ಲಿ ಈಗಾಗಲೇ 65,911 ಅಂಗನವಾಡಿ ಕೇಂದ್ರಗಳು ಹಾಗೂ 3,331 ಮಿನಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯ ಸರ್ಕಾರ ಇವುಗಳನ್ನು ಕೂಡಲೇ ಕಿನ್ನರ್ ಗಾರ್ಡನ್, ಇಂಗ್ಲಿಷ್ ಕಾನ್ವೆಂಟ್, ನರ್ಸರಿ ಸ್ಕೂಲ್ಗಳನ್ನಾಗಿ ಮಾರ್ಪಡಿಸಬೇಕು’ ಆಗ್ರಹಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗೋವಾ ಸರ್ಕಾರದ ಮಾದರಿಯಲ್ಲಿ ಸೇವಾ ಅವಧಿಯ ಆಧಾರದ ಮೇಲೆ ಗೌರವ ಧನ ಕೊಡಬೇಕು. ನಿವೃತ್ತಿ ಹೊಂದಿದ ನೌಕರರಿಗೆ ಭವಿಷ್ಯ ನಿಧಿ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ 60 ವರ್ಷಕ್ಕೆ ನಿವೃತ್ತಿ ಹೊಂದುವ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಪ್ರತಿ ತಿಂಗಳು ಮಾಸಾಶನ ರೂಪದಲ್ಲಿ ₹ 6 ಸಾವಿರ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮಿ ದಂಡಿ, ಪ್ರಧಾನ ಕಾರ್ಯದರ್ಶಿ ಚಂದ್ರಕಲಾ ಕಮಠಾಣಕರ್, ಸಂಚಾಲಕ ಬಾಬುರಾವ್ ಹೊನ್ನಾ, ಸಹ ಸಂಚಾಲಕ ನಜೀರ್ ಅಹಮ್ಮದ್ ಚೊಂಡಿ, ರಾಜ್ಯ ಸಮಿತಿ ಸದಸ್ಯೆ ಶಕುಂತಲಾ ಅಮಲಾಪೂರ, ಕಾರ್ಯದರ್ಶಿ ಸರೋಜನಿ, ಸಹ ಕಾರ್ಯದರ್ಶಿ ಮನೋರಂಜಿನಿ, ಬಸಮ್ಮ, ಮಧುಮತಿ, ಸಾರಿಕಾ, ವಿಶಾಲಾಕ್ಷಿ, ಭಾರತಿ ಕಾಡವಾದ, ಇಂದುಮತಿ, ಪುಷ್ಪ ಯರನಳ್ಳಿ, ಅನಿತಾ ಲಾಲಬಾಗ, ಚಿನ್ನಮ್ಮ, ರೇಖಾ ಮುಗದಾಳ, ಮಂಗಲಾ ಸಾತೋಳಿ, ಸರುಬಾಯಿ, ಸಂತೋಷ ಅಲ್ಮಾಸಪೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.