ಭಾಲ್ಕಿ(ಬೀದರ್): ಜಿಲ್ಲಾಧಿಕಾರಿಗಳು ಹಲವು ಅಕ್ರಮಗಳಲ್ಲಿ ಭಾಗಿಯಾಗಿರುವುದು ಜಿಲ್ಲೆಯಾದ್ಯಂತ ಮನೆ ಮಾತಾಗಿದೆ. ವಸ್ತುಸ್ಥಿತಿ ಹೀಗಿರುವಾಗ ಶಾಸಕ ಈಶ್ವರ ಖಂಡ್ರೆ ಜಿಲ್ಲಾಧಿಕಾರಿಗಳ ಕ್ಷಮೆ ಕೇಳಬೇಕು ಎನ್ನುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಮುಖಂಡರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಶಾಸಕ ಈಶ್ವರ ಖಂಡ್ರೆ ಅವರ ಬಗ್ಗೆ ಮಾತನಾಡುವ ನೈತಿಕತೆ ಬಾಬು ವಾಲಿ ಅವರಿಗಿಲ್ಲ. ಶಾಸಕರು ಏನು ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತು. ಕೆಲ ವರ್ಷಗಳ ಹಿಂದೆ ಶಾಸಕರಿಂದಲೇ ಸಹಾಯ ಪಡೆದು ಬೆಳೆದ ವ್ಯಕ್ತಿ ಅವರ ವರ್ಚಸ್ಸಿಗೆ ಕುಂದು ತರುವಂತೆ ಮಾತನಾಡುತ್ತಿರುವುದು ನಿಜಕ್ಕೂ ವಿಶ್ವಾಸ ದ್ರೋಹದ ಪರಮಾವಧಿ ಎಂದು ದೂರಿದ್ದಾರೆ.
ಜಿಲ್ಲೆಗೆ ಯಾರೇ ಉನ್ನತಾಧಿಕಾರಿ ಬಂದರೂ ಅವರ ಹಿಂದೆ ಸುತ್ತಾಡುತ್ತಾ, ಸ್ವಾರ್ಥ ಸಾಧನೆ ಮಾಡಿಕೊಳ್ಳುವ ಬಾಬು ವಾಲಿ, ಜಿಲ್ಲಾಧಿಕಾರಿಗಳ ದಕ್ಷತೆ ಮತ್ತು ಪ್ರಾಮಾಣಿಕತೆ ಬಗ್ಗೆ ಪ್ರಮಾಣಪತ್ರ ನೀಡುತ್ತಿದ್ದಾರೆ. ಇವರಿಗೆ ನೈತಿಕತೆ ಇದ್ದರೆ, ವಸತಿ ಯೋಜನೆಯಲ್ಲಿ ರಾಜಕೀಯ ಪ್ರೇರಿತ ನೋಟಿಸ್ ನೀಡಿದ ಜಿಲ್ಲಾಧಿಕಾರಿ ಕ್ರಮ ಖಂಡಿಸಬೇಕಿತ್ತು. ಅದು ಬಿಟ್ಟು, ಅವರ ಭಟ್ಟಂಗಿಯಂತೆ ವರ್ತಿಸುವ ಈತ, ಶಾಸಕರು, ಅಧಿಕಾರಿಗಳನ್ನು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಶಾಸಕ ಈಶ್ವರ ಖಂಡ್ರೆ ಲಿಂಗಾಯತ ವೀರಶೈವ ಸಮಾಜದ ಮುಖಂಡರಾಗಿ ಹಗಲಿರುಳು ರಾಜ್ಯಾದ್ಯಂತ ಸುತ್ತಿ, ಜನಪರ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಮುಖಂಡರಾದ
ಪ್ರಕಾಶ ಮಾಶೆಟ್ಟೆ, ಶಂಕರ ಭುರಾಳೆ, ಶಿವಕುಮಾರ ದೇಶಮುಖ, ಬಸವರಾಜ ವಂಕೆ, ವಿಜಯಕುಮಾರ ರಾಜಭವನ, ಸೂರ್ಯಕಾಂತ ಪಾಟೀಲ, ಧನರಾಜ ಪಾಟೀಲ, ಕಪಿಲ್ ಕಲ್ಯಾಣೆ, ಮಹಾದೇವ ಬೇಲೂರೆ, ಗುಂಡೇರಾವ್ ಪಾಟೀಲ, ಧನರಾಜ ಪಾಟೀಲ ಹಲಬರ್ಗಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.