ADVERTISEMENT

ಔರಾದ್ ಕ್ಷೇತ್ರ: ಬೆಳೆ ಹಾನಿ ಪ್ರದೇಶಗಳಿಗೆ ಶಾಸಕ ಭೇಟಿ

10 ಸಾವಿರ ಹೆಕ್ಟೇರ್ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 5:10 IST
Last Updated 24 ಆಗಸ್ಟ್ 2025, 5:10 IST
ಔರಾದ್ ತಾಲ್ಲೂಕಿನ ಬೊಂತಿ ಕೆರೆಗೆ ಶಾಸಕ ಪ್ರಭು ಚವಾಣ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು
ಔರಾದ್ ತಾಲ್ಲೂಕಿನ ಬೊಂತಿ ಕೆರೆಗೆ ಶಾಸಕ ಪ್ರಭು ಚವಾಣ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು   

ಔರಾದ್: ಈ ವಾರ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಗೆ ಔರಾದ್ ಹಾಗೂ ಕಮಲನಗರ ತಾಲ್ಲೂಕಿನ 10 ಸಾವಿರ ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿಯಾಗಿದೆ ಎಂದು ಶಾಸಕ ಪ್ರಭು ಚವಾಣ್ ತಿಳಿಸಿದರು.

ಮಳೆಯಿಂದ ಕೆರೆ ಒಡೆದು ಹಾನಿಯಾದ ಬೊಂತಿ, ಬಾವಲಗಾಂವ್, ಅಕನಾಪುರ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

‘ಒಂದೇ ದಿನ 300 ಮಿ.ಮೀ ಮಳೆಯಾಗಿರುವುದರಿಂದ ಈ ಭಾಗದಲ್ಲಿ ಬಹಳಷ್ಟು ಹಾನಿಯಾಗಿದೆ. ಹೊಲಗಳಲ್ಲಿ ನೀರು ನುಗ್ಗಿ ಮುಂಗಾರು ಬೆಳೆ ಕೊಚ್ಚಿ ಹೋಗಿದೆ. ರಸ್ತೆ, ಸೇತುವೆಗಳು ಕಿತ್ತು ಹೋಗಿವೆ. ಮನೆಗಳಿಗೆ ನೀರು ನುಗ್ಗಿ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ವಿದ್ಯತ್‌ ಕಂಬಗಳು ಬಿದ್ದು ವಿದ್ಯತ್ ಸಂಪರ್ಕ ಕಡಿತವಾಗಿದೆ. ಇದರಿಂದ ಈ ಭಾಗದ ಜನರಿಗೆ ತೀವ್ರ ತೊಂದರೆಯಾಗಿದ್ದು ತಕ್ಷಣ ನೆರವಿಗಾಗಿ ಜನ ಕಾಯುತ್ತಿದ್ದಾರೆ. ಈ ಎಲ್ಲ ವಿಷಯ ನಾನು ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಖುದ್ದಾಗಿ ಮುಖ್ಯಂಮಂತ್ರಿಗೂ ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿದ್ದೇನೆ. ಅತಿವೃಷ್ಟಿ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಎಕರೆ ₹25 ಸಾವಿರ ಪರಿಹಾರ ನೀಡಲು ಬೇಡಿಕೆ ಮಂಡಿಸಿದ್ದೇನೆ. ಸರ್ಕಾರ ಆದಷ್ಟು ಬೇಗ ರೈತರ ನೆರವಿಗೆ ಬರಲಿದೆ’ ಎಂದು ಶಾಸಕರು ಸ್ಥಳದಲ್ಲಿದ್ದ ರೈತರಿಗೆ ಸಮಾಧಾನ ಮಾಡಿದರು.

ADVERTISEMENT

‘ಈ ಬಾರಿ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದು, ನಾವು ಉತ್ಸಾಹದಿಂದ ಬಿತ್ತನೆ ಮಾಡಿದ್ದೇವೆ. ಉದ್ದು ಹಾಗೂ ಹೆಸರು ಕಟಾವಿಗೆ ಬರುವಷ್ಟರಲ್ಲಿ ಮಳೆ ಎಲ್ಲವೂ ಕೊಚ್ಚಿಕೊಂಡು ಹೋಗಿದೆ’ ಎಂದು ಬಾವಲಗಾಂವ್ ರೈತರು ಗೋಳು ತೋಡಿಕೊಂಡರು.

ತಹಶೀಲ್ದಾರ್ ಮಹೇಶ ಪಾಟೀಲ, ಅಮಿತಕುಮಾರ ಕುಲಕರ್ಣಿ, ತಾ.ಪಂ ಇಒ ಕಿರಣ ಪಾಟೀಲ, ಹಣಮಂತರಾವ ಕೌಟಗೆ, ಮುಖಂಡ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ, ಸತೀಷ ಪಾಟೀಲ, ಯೋಗೇಶ ಪಾಟೀಲ, ಧೊಂಡಿಬಾ ನರೋಟೆ, ಪ್ರವೀಣ ಕಾರಬಾರಿ, ಸುಜಿತ ರಾಠೋಡ, ಪ್ರದೀಪ ಪವಾರ, ಸಂಜು ಮುರ್ಕೆ, ಲೋಕೋಪಯೋಗಿ, ಪಂಚಾಯತ್ ರಾಜ್‌ ಇಲಾಖೆ ಅಧಿಕಾರಿಗಳು ಇದ್ದರು.

ಮನೆಗಳಿಗೆ ಹಾನಿ: ಸಂತ್ರಸ್ತರಿಗೆ ಪರಿಹಾರ

ಬೊಂತಿ ಕೆರೆ ಒಡೆದು ಮನೆಗಳಿಗೆ ನೀರು ನುಗ್ಗಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ.

‘ಕೆರೆ ಒಡೆದು ಬಾವಲಗಾಂವ್‌ ಗ್ರಾಮದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವರ ಮನೆಯಲ್ಲಿದ್ದ ದವಸಧಾನ್ಯ ಬಟ್ಟೆ ಬರೆ ಹಾಳಾಗಿವೆ. ಕೆಲ ಮನೆಗಳ ಗೋಡೆಯೂ ಕುಸಿದಿದೆ. ಈ ಹಿನ್ನೆಲೆಯಲ್ಲಿ ತಕ್ಷಣದ ಪರಿಹಾರವಾಗಿ ಕೆಲ ಕುಟುಂಬಕ್ಕೆ ₹2500 ಮತ್ತೆ ಕೆಲವರಿಗೆ ₹5000 ಪರಿಹಾರ ನೀಡಲಾಗಿದೆ’ ಎಂದು ತಹಶೀಲ್ದಾರ್‌ ಮಹೇಶ ಪಾಟೀಲ ತಿಳಿಸಿದ್ದಾರೆ.

‘ಮನೆ ಗೋಡೆ ಕುಸಿದ ಸಂತ್ರಸ್ತರ ಪಟ್ಟಿ ತಯಾರಿಸಲಾಗುತ್ತಿದೆ. ಅವರಿಗೂ ಪರಿಹಾರ ನೀಡಲಾಗುತ್ತದೆ. ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಸೋಮವಾರದಿಂದ ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸರ್ವೆ ನಡೆಯಲಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.