ಭಾಲ್ಕಿ: ‘ನಮ್ಮಲ್ಲಿರುವ ಚಂಚಲ ಮನಸ್ಸು ಮಹಾ ರೋಗಗಳಿಗಿಂತಲೂ ಅಪಾಯಕಾರಿ’ ಎಂದು ತೆಲಂಗಾಣದ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ.ಬಸವಲಿಂಗ ಅವಧೂತರು ಹೇಳಿದರು.
ತಾಲ್ಲೂಕಿನ ಕಣಜಿ ಗ್ರಾಮದ ಹನು ಮಾನ ಮಂದಿರದಲ್ಲಿ ನಡೆದ 41 ದಿವಸದ ಜಪ ಮುಕ್ತಾಯ ಮತ್ತು ಶ್ರಾವಣ ಸಮಾಪ್ತಿ ಹಾಗೂ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಯಾವುದು ಒಳ್ಳೆಯದು. ಯಾವುದು ಕೆಟ್ಟದ್ದು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಸಮಾಧಾನದಿಂದ ಜಪ, ಧ್ಯಾನ, ಶರಣರ ವಚನಗಳ ಅಧ್ಯಯನ ಮಾಡಿದರೆ ಬದುಕು ಸಾರ್ಥಕವಾಗುತ್ತದೆ ಎಂದು ಮಾರ್ಮಿಕ ಉದಾಹರಣೆಯೊಂದಿಗೆ ಹೇಳಿದರು.
ಜೀವನದಲ್ಲಿ ಸಂತೃಪ್ತಿಗಿಂತ ದೊಡ್ಡ ಸಂಪತ್ತು ಯಾವುದೂ ಇಲ್ಲ. ಇರುವುದರಲ್ಲೇ ತೃಪ್ತಿಪಟ್ಟುಕೊಳ್ಳಬೇಕು. ಇಲ್ಲದ್ದನ್ನು ಬಯಸಿ ನೆಮ್ಮದಿ ಹಾಳು ಮಾಡಿಕೊಳ್ಳಬಾರದು ಎಂದು ಹೇಳಿದರು. ಗ್ರಾಮದ ಮುಖ್ಯ ದ್ವಾರದಿಂದ ಶ್ರೀಗಳನ್ನು ಮೆರವಣಿಗೆ ಮೂಲಕ ಹನುಮಾನ ಮಂದಿರಕ್ಕೆ ಕರೆ ತರಲಾಯಿತು. ಪ್ರಮುಖರಾದ ವಿಜಯಕುಮಾರ ಮೇತ್ರೆ, ಸಂಗಮೇಶ ಡಾವರಗಾಂವ, ವೆಂಕಟ ಸುತಾರ, ಧನರಾಜ ಕಂದಗೊಳೆ, ಸಂತೋಷ ಉಕಾಜೀ, ಈಶ್ವರ ಕೋಳಿ, ಕಿರಣ ಬಿದೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.