ADVERTISEMENT

ಬಸವಲಿಂಗ ಪಟ್ಟದ್ದೇವರು ಶೈಕ್ಷಣಿಕ ಕ್ರಾಂತಿ ರೂವಾರಿ: ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 10:50 IST
Last Updated 14 ಜನವರಿ 2020, 10:50 IST
ಭಾಲ್ಕಿ ತಾಲ್ಲೂಕಿನ ಕಡ್ಯಾಳದ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಚನ್ನಬಸವೇಶ್ವರ ಗುರುಕುಲ ವಸತಿ ಪ್ರೌಢ ಶಾಲೆಯ ವಾರ್ಷಿಕೋತ್ಸವವನ್ನು ಕಲಬುರ್ಗಿ ಆಕಾಶವಾಣಿ ಮುಖ್ಯಸ್ಥ ರಾಜೇಂದ್ರ ಆರ್.ಕುಲಕರ್ಣಿ ಉದ್ಘಾಟಿಸಿದರು
ಭಾಲ್ಕಿ ತಾಲ್ಲೂಕಿನ ಕಡ್ಯಾಳದ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಚನ್ನಬಸವೇಶ್ವರ ಗುರುಕುಲ ವಸತಿ ಪ್ರೌಢ ಶಾಲೆಯ ವಾರ್ಷಿಕೋತ್ಸವವನ್ನು ಕಲಬುರ್ಗಿ ಆಕಾಶವಾಣಿ ಮುಖ್ಯಸ್ಥ ರಾಜೇಂದ್ರ ಆರ್.ಕುಲಕರ್ಣಿ ಉದ್ಘಾಟಿಸಿದರು   

ಭಾಲ್ಕಿ: ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹತ್ತಾರು ಗುಣಾತ್ಮಕ ಶಾಲೆಗಳನ್ನು ಸ್ಥಾಪಿಸಿ ಸುಮಾರು 25 ವರ್ಷಗಳಿಂದ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಬಸವಲಿಂಗ ಪಟ್ಟದ್ದೇವರು ಶೈಕ್ಷಣಿಕ ಕ್ರಾಂತಿಯ ರೂವಾರಿ ಎಂದು ಕಲಬುರ್ಗಿ ಆಕಾಶವಾಣಿ ಮುಖ್ಯಸ್ಥ ರಾಜೇಂದ್ರ ಆರ್.ಕುಲಕರ್ಣಿ ಹೇಳಿದರು.

ತಾಲ್ಲೂಕಿನ ಕಡ್ಯಾಳದ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಚನ್ನಬಸವೇಶ್ವರ ಗುರುಕುಲ ವಸತಿ ಪ್ರೌಢ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಗುರುಕುಲ ವಸತಿ ಶಾಲೆಯಲ್ಲಿ ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ವಿದ್ಯಾರ್ಥಿಗಳು ಸರ್ವಾಂಗೀಣ ವಿಕಾಸಕ್ಕಾಗಿ ಆಟ, ಸಾಂಸ್ಕೃತಿಕ ಕಾರ್ಯಕ್ರಮ, ಯೋಗ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಧನಾತ್ಮಕ ಭಾವನೆ ಬೆಳೆಸಿ ಶೈಕ್ಷಣಿಕವಾಗಿ ಎತ್ತರಕ್ಕೆ ಬೆಳೆಯುಲು ಸಹಕಾರಿಯಾಗಬೇಕು ಎಂದು ಸಲಹೆ ನೀಡಿದರು.

ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಹುದ್ದೆಗೆ ಆಯ್ಕೆಯಾಗಿರುವ ನೀಲಾಂಬಿಕಾ ಬಿ.ಪಾಟೀಲ ಮಾತನಾಡಿ, ಯಾರಿಗೆ ಪ್ರಾಥಮಿಕ, ಪ್ರೌಢ ವಿಭಾಗದ ಶಿಕ್ಷಣ ಚೆನ್ನಾಗಿ ದೊರೆತಿರುತ್ತದೆಯೋ ಅವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸುಲಭವಾಗಿ ಪಾಸಾಗಬಹುದು ಎಂದು ಹೇಳಿದರು.

ಆಕಾಶವಾಣಿಯ ಸದಾನಂದ ಪೆರ್ಲಾ ಮಾತನಾಡಿ, ಪಾಲಕರ ನೈಜ ಆಸ್ತಿ ಮಕ್ಕಳು. ಹಾಗಾಗಿ, ತಂದೆ-ತಾಯಿ ಮಕ್ಕಳಿಗಾಗಿ ಹಣವನ್ನು ಕೂಡಿಡದೆ ಅವರನ್ನೇ ಸಮಾಜದ ಅಮೂಲ್ಯ ಸಂಪತ್ತನ್ನಾಗಿಸಬೇಕು ಎಂದು ತಿಳಿಸಿದರು.

ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ನೈಜ ಪ್ರತಿಭೆಯನ್ನು ಅರಿಯುವ ಶಕ್ತಿ, ದೃಷ್ಠಿ ಗುರುವಿಗೆ ಮಾತ್ರ ಇದೆ. ಶಿಕ್ಷಕರು ವಿದ್ಯಾರ್ಥಿಗಳ ಬಾಳು ಬೆಳಗುವ ಶಿಲ್ಪಿಗಳಾಗಬೇಕು ಎಂದು ಸಲಹೆ ನೀಡಿದರು.

ಸೋಮಶೇಖರ ರೂಳಿ, ದತ್ತಾತ್ರೇಯ ಮುಳೆ, ಚಂದ್ರಶೇಖರ ಕ್ಯಾಂಗನಾಳ, ಜಗನ್ನಾಥ ದೇಶಮುಖ, ಶಿವಲೀಲಾ ಮಣಿಗಿರೆ, ಮಾರುತೆಪ್ಪಾ ಮುಚಳಂಬೆ, ಅನಿಲ್‍ಕುಮಾರ ಕಪಲಾಪೂರೆ, ಪ್ರಿಯಾ ಓಂಪ್ರಕಾಶ ಪಾಟೀಲ ಇದ್ದರು.

ಆಡಳಿತಾಧಿಕಾರಿ ಮೋಹನರೆಡ್ಡಿ ಸ್ವಾಗತಿಸಿದರು. ಮುಖ್ಯಶಿಕ್ಷಕ ಲಕ್ಷ್ಮಣ ಮೇತ್ರೆ ವರದಿ ವಾಚಿಸಿದರು. ಮಧುಕರ ಗಾಂವ್ಕರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.