ADVERTISEMENT

ವಾಹನ ದುರ್ಬಳಕೆ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 15:15 IST
Last Updated 9 ಏಪ್ರಿಲ್ 2020, 15:15 IST

ಬಸವಕಲ್ಯಾಣ: ಲಾಕ್‌ಡೌನ್‌ ತಪ್ಪಿಸಿಕೊಳ್ಳಲು ಕಾರಿನ ಮುಂಭಾಗದ ಗಾಜಿನ ಮೇಲೆ ಕಾನೂನು ಬಾಹಿರವಾಗಿ 'ಪೊಲೀಸ್' ಎಂದು ಬರೆದು ವಾಹನ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಬಸವಕಲ್ಯಾಣದ ಪೊಲೀಸರು ಮಹಿಳೆ ಸೇರಿ ಗುರುವಾರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊರೊನಾ ವೈರಸ್‌ ತಡೆಗಾಗಿ ಲಾಕ್‌ಡೌನ್‌ ಮಾಡಲಾಗಿದೆ. ಗಸ್ತಿನಲ್ಲಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲಕುಮಾರ ಅವರು, ಹರಳಯ್ಯ ವೃತ್ತದ ಹತ್ತಿರ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಟಾಟಾ ಫಾರ್ಚುನರ್ ಗಾಜಿನ ಮೇಲೆ ‘ಪೊಲೀಸ್’ ಎಂದು ಬರೆದಿರುವುದು ಹಾಗೂ ಮಹಾರಾಷ್ಟ್ರದ ಸೊಲ್ಲಾಪುರದ ಸಾರಿಗೆ ಅಧಿಕಾರಿ ಅಗತ್ಯ ವಸ್ತು ಸಾಗಣೆ ವಾಹನ ಎಂದು ನೀಡಿದ ಪ್ರಮಾಣಪತ್ರ ಅಂಟಿಸಿರುವುದು ಕಂಡು ಬಂದಿದೆ.

ಪೊಲೀಸರು ವಾಹನ ಚಾಲಕನನ್ನು ವಿಚಾರಿಸಿದಾಗ ಆತ, ಮಹಾರಾಷ್ಟ್ರದ ಲಾತೂರ್‌ನ ರೇಣುಕಾನಗರದ ಸಂಜಯ ಹರಿಬಾ ಜಾಧವ ಹಾಗೂ ವಾಹನದಲ್ಲಿದ್ದ ಮಹಿಳೆ ಬಸವಕಲ್ಯಾಣದ ಶಾಲಿನಿ ವಾಡೇಕರ್ ಎಂದು ತಿಳಿಸಿದ್ದಾನೆ.

ADVERTISEMENT

ಪೊಲೀಸರು ಇವರ ವಿರುದ್ಧ ಸುಳ್ಳು ದಾಖಲೆ ಅಂಟಿಸಿದ ಹಾಗೂ ಅನಗತ್ಯವಾಗಿ ಸಂಚರಿಸಿದ ಆರೋಪದ ಮೇಲೆ ಬಸವಕಲ್ಯಾಣ ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.