
ಬಸವಕಲ್ಯಾಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿರುವುದಕ್ಕಾಗಿ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಶಾಸಕ ಶರಣು ಸಲಗರ ಮತ್ತಿತರರು ಪಾಲ್ಗೊಂಡಿದ್ದರು
ಬಸವಕಲ್ಯಾಣ: ಹುಲಸೂರ ಪಟ್ಟಣ ಪಂಚಾಯಿತಿಯನ್ನಾಗಿ ಶೀಘ್ರದಲ್ಲಿ ಘೋಷಿಸದಿದ್ದರೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸುವರ್ಣ ಸೌಧದ ಎದುರು ಅರೆಬೆತ್ತಲೆ ಧರಣಿ ಕೈಗೊಳ್ಳುವೆ’ ಎಂದು ಶಾಸಕ ಶರಣು ಸಲಗರ ಹೇಳಿದರು.
ನಗರದ ಡಾ.ಅಂಬೇಡ್ಕರ ವೃತ್ತದಲ್ಲಿ ಶುಕ್ರವಾರ ಬಿಹಾರದಲ್ಲಿ ಬಿಜೆಪಿಗೆ ಬಹುಮತ ದೊರೆತಿರುವುದಕ್ಕೆ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.
‘ಪೌರಾಡಳಿತ ಸಚಿವ ರಹೀಂಖಾನ್ ಜಿಲ್ಲೆಯವರೇ ಆಗಿದ್ದರೂ ಹುಲಸೂರಗೆ ಅನ್ಯಾಯ ಮಾಡಿದ್ದಾರೆ. ಹುಲಸೂರ ಮತ್ತು ಮಂಠಾಳನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಆದರೂ, ಮಂಠಾಳಕ್ಕಿಂತ ಚಿಕ್ಕದಾಗಿರುವ ರಾಜೇಶ್ವರಗೆ ಆ ಸ್ಥಾನ ನೀಡಲಾಗಿದೆ. ಹೋಬಳಿ ಕೇಂದ್ರಗಳಿಗೆ ಮೇಲ್ದರ್ಜೆಗೆ ಏರಿಸಿದ್ದರೂ ಅಭ್ಯಂತರವಿಲ್ಲ. ಆದರೆ, ಈಗಾಗಲೇ ತಹಶೀಲ್ದಾರ್ ಹಾಗೂ ಇತರೆ ಕಚೇರಿಗಳಿರುವ ಹುಲಸೂರನ್ನು ಕಡೆಗಣಿಸಬಾರದಿತ್ತು’ ಎಂದರು.
‘ರೈತರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ನಾನು ನಗರದಲ್ಲಿ ಅರೆಬೆತ್ತಲೆ ಮೆರವಣಿಗೆ ಕೂಡ ಮಾಡಿದ್ದೇನೆ. ಆದರೂ, ಸರ್ಕಾರ ಬೆಳೆ ಹಾನಿ ಪರಿಹಾರ ನೀಡುತ್ತಿಲ್ಲ. ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರೂ ಕಬ್ಬಿಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿದ್ದು ಬಿರಾದಾರ, ಮುಖಂಡರಾದ ದೀಪಕ ಗಾಯಕವಾಡ, ರವಿ ಚಂದನಕೆರೆ, ಸೂರ್ಯಕಾಂತ ಚಿಲ್ಲಾಬಟ್ಟೆ, ಶಂಕರ ನಾಗದೆ, ಕೃಷ್ಣಾ ಗೋಣೆ, ಅರವಿಂದ ಮುತ್ತೆ, ಪುಷ್ಪರಾಜ ಹಾರಕೂಡೆ, ರಮೇಶ ಧಬಾಲೆ, ಶಿವಕುಮಾರ ಸೀತಾರ, ಶೋಭಾವತಿ ತೆಲಂಗ್, ಸುಭಾಷ ರೇಕುಳಗಿ, ವಿಕಾಸ ಸೂರ್ಯವಂಶಿ, ರಾಜಕುಮಾರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.