ADVERTISEMENT

ಶಾಸಕರ ಕುಮ್ಮಕ್ಕಿನಿಂದ ಜಿಪಿಎಸ್ ಸ್ಥಗಿತ: ಖೂಬಾ ಆರೋಪ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 15:48 IST
Last Updated 8 ಆಗಸ್ಟ್ 2020, 15:48 IST
ಸಂಸದ ಭಗವಂತ ಖೂಬಾ
ಸಂಸದ ಭಗವಂತ ಖೂಬಾ   

ಬೀದರ್: ಜಿಲ್ಲೆಯ ಬೇರೆ ತಾಲ್ಲೂಕುಗಳಲ್ಲಿ ವಸತಿ ಯೋಜನೆ ಮನೆಗಳ ಜಿಪಿಎಸ್ ಕಾರ್ಯ ಪ್ರಗತಿಯಲ್ಲಿದ್ದರೂ ಭಾಲ್ಕಿ ತಾಲ್ಲೂಕಿನಲ್ಲಿ ಸಂಪೂರ್ಣ ಸ್ಥಗಿತಗೊಂಡಿದೆ. ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಿಪಿಎಸ್ ಮಾಡುತ್ತಿಲ್ಲ ಎಂದು ಸಂಸದ ಭಗವಂತ ಖೂಬಾ ಆರೋಪಿಸಿದ್ದಾರೆ.

ಜಿಪಿಎಸ್ ಹಾಗೂ ಮನೆ ಪರಿಶೀಲನೆ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ವಿಚಾರಿಸಿದರೆ, ಇಲ್ಲಸಲ್ಲದ ಸಬೂಬು ಹೇಳಿ ನಿರ್ಲಕ್ಷಿಸುತ್ತಿದ್ದಾರೆ. ದ್ವೇಷ ಭಾವನೆ ಸಾಧಿಸಿ ಜಿಪಿಎಸ್ ಮಾಡುತ್ತಿಲ್ಲ ಎಂದು ಜನ ತಮ್ಮೆದುರು ದೂರಿದ್ದಾರೆ ಎಂದು ತಿಳಿಸಿದ್ದಾರೆ.

ಭಾಲ್ಕಿ ತಾಲ್ಲೂಕಿನ ಪಿಡಿಒಗಳ ಬೇಜವಾಬ್ದಾರಿತನದಿಂದ ಬಡವರು ಕಂಗಾಲಾಗುತ್ತಿದ್ದಾರೆ. ಆರ್ಥಿಕವಾಗಿ ತೊಂದರೆಗೆ ಒಳಗಾಗುತ್ತಿದ್ದಾರೆ. ಕೂಡಲೇ ತಾಲ್ಲೂಕಿನಲ್ಲಿ ಬಾಕಿ ಉಳಿದ ಎಲ್ಲ ಮನೆಗಳ ಜಿಪಿಎಸ್ ಪೂರ್ಣಗೊಳಿಸಿ, ರಾಜೀವ ಗಾಂಧಿ ವಸತಿ ನಿಗಮಕ್ಕೆ ವರದಿ ಸಲ್ಲಿಸಬೇಕು. ವರದಿ ಸಲ್ಲಿಸಿದ ಬಳಿಕ ಸರ್ಕಾರ ಅನುದಾನ ಬಿಡುಗಡೆ ಮಾಡಲಿದೆ ಎಂದು ಹೇಳಿದ್ದಾರೆ.

ADVERTISEMENT

ನಗರ ಪ್ರದೇಶದ ಮನೆಗಳ ಜಿಪಿಎಸ್‍ಗಳನ್ನು ಸಂಬಂಧಪಟ್ಟವರು ಮಾಡಲು ಜಿಲ್ಲಾಧಿಕಾರಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣಗೊಂಡ ಮನೆಗಳ ಜಿಪಿಎಸ್‍ಗಳನ್ನು ಪಿಡಿಒಗಳು ಕೂಡಲೇ ಮಾಡಲು ಜಿಲ್ಲಾ ಪಂಚಾಯಿತಿ ಸಿಇಒ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವೈಯಕ್ತಿಕ ಕೆಲಸಗಳ ನೆಪದಲ್ಲಿ, ಇನ್ಯಾರದೋ ಒತ್ತಡಕ್ಕೆ ಒಳಗಾಗಿ ಬಡವರಿಗೆ ತೊಂದರೆ ಕೊಟ್ಟಿದ್ದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕ್ರಮಕ್ಕಾಗಿ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

2022 ರ ವರೆಗೆ ಪ್ರತಿಯೊಬ್ಬರೂ ಸೂರು ಹೊಂದಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೂರಿಲ್ಲದ ಬಡವರಿಗೆ ಪ್ರತಿ ವರ್ಷ ಮನೆಗಳನ್ನು ನೀಡುತ್ತಿದೆ. ಅದರಂತೆ ಬೀದರ್ ಜಿಲ್ಲೆಗೂ ಮನೆಗಳು ಮಂಜೂರಾಗಿವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.