
ಭಾಲ್ಕಿ: ಭೀಮಣ್ಣ ಖಂಡ್ರೆ ಅವರು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರು, ಉಪನ್ಯಾಸಕರನ್ನು ನೇಮಕಾತಿ ಮಾಡುವಾಗ ಕೇವಲ ಪ್ರತಿಭಾವಂತಿಕೆಗೆ ಮಹತ್ವ ನೀಡುತ್ತಿದ್ದರು ಹೊರತು ತಮ್ಮ ಜಾತಿ, ಪ್ರದೇಶ ಎಂದು ಭೇದಭಾವ ಮಾಡುತ್ತಿರಲಿಲ್ಲ.
ಗುಣಾತ್ಮಕ ಶಿಕ್ಷಣದಿಂದ ಈ ಭಾಗದ ಪ್ರಗತಿ ಸಾಧ್ಯ ಎಂದು ಬಲವಾಗಿ ನಂಬಿದ್ದರು. ತಮ್ಮ ಸಂಸ್ಥೆ ಅಡಿಯಲ್ಲಿ ನಡೆಯುತ್ತಿದ್ದ ಶಾಲಾ, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಲ್ಲಿನ ಕಲಿಕಾಮಟ್ಟ ಯಾವುದೇ ಕಾರಣಕ್ಕೂ ಕುಸಿಯಬಾರದು. ಈ ನಿಟ್ಟಿನಲ್ಲಿ ಶಿಕ್ಷಕ ಸಿಬ್ಬಂದಿ ಶ್ರಮ ವಹಿಸಿ ದುಡಿದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ದುಡಿಯಬೇಕು ಎಂದು ಸಿಬ್ಬಂದಿಗೆ ಸಭೆಯಲ್ಲಿ ಖಡಕ್ಕಾಗಿ ಹೇಳುತ್ತಿದ್ದರು.
ಶೈಕ್ಷಣಿಕ ಫಲಿತಾಂಶದಲ್ಲಿ ಏರುಪೇರಾದಲ್ಲಿ ಮುಲಾಜಿಲ್ಲದೇ ಸಂಬಂಧಪಟ್ಟ ಶಿಕ್ಷಕ, ಉಪನ್ಯಾಸಕರಿಗೆ ತರಾಟೆಗೆ ತೆಗೆದುಕೊಂಡು ಇನ್ನೂ ಚೆನ್ನಾಗಿ ದುಡಿಯಬೇಕು ಎಂದು ಎಚ್ಚರಿಸುತ್ತಿದ್ದರು.
ಸರ್ಕಾರದಲ್ಲಿ ಸಚಿವ, ಶಾಸಕರಾದ ಮೇಲೆ ದೊರೆಯುವ ಸರ್ಕಾರಿ ಬಂಗಲೆಯನ್ನು ಅಧಿಕಾರ ಕಳೆದುಕೊಂಡ ನಂತರವೂ ತಮ್ಮದೇ ಎಂಬಂತೆ ವರ್ತಿಸುವ ರಾಜಕಾರಣಿಗಳಿಗೇನೂ ಕಡಿಮೆ ಇಲ್ಲ. ಆದರೆ, 1992-94ರಲ್ಲಿ ಎಂ.ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಖಂಡ್ರೆ ಅವರು ಸರ್ಕಾರ ಪತನವಾದ ಕೇವಲ ಅರ್ಧ ಗಂಟೆಯಲ್ಲಿ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದರು.
ಅಸಂಭವವನ್ನು ಸಂಭವವನ್ನಾಗಿಸುವ ಉಕ್ಕಿನ ಎದೆಗಾರಿಕೆ, ದೃಢ ಸಂಕಲ್ಪ, ದೂರದೃಷ್ಟಿತ್ವ ಹೊಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.