ಔರಾದ್: ಕಳೆದ ಕೆಲ ದಿನಗಳಿಂದ ಬಿಸಿಲಿನ ತಾಪ ಜಾಸ್ತಿಯಾಗಿ ಹೊರಗೆ ಬರಲು ಆಗುತ್ತಿಲ್ಲ. ಈ ನಡುವೆ ಬೀದರ್ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಪರ ಅವರ ತಾಯಿ ಗೀತಾ ಈಶ್ವರ ಖಂಡ್ರೆ ಅವರು ಸುಡು ಬಿಸಿಲು ಲೆಕ್ಕಿಸದೆ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಬುಧವಾರ ಬೆಳಿಗ್ಗೆ ಇಲ್ಲಿಯ ಅಮರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮಧ್ಯಾಹ್ನ ಮನೆ ಮನೆಗೆ ತೆರಳಿ ಮತಯಾಚಿಸಿದರು. ವಿಶೇಷವಾಗಿ ಮಹಿಳೆಯರನ್ನು ಭೇಟಿ ಮಾಡಿ ಅವರ ಕುಶಲೋಪರಿ ವಿಚಾರಿಸಿ ಗ್ಯಾರಂಟಿ ಯೋಜನೆ ತಲುಪಿರುವ ಬಗ್ಗೆ ಮನವರಿಕೆ ಮಾಡಿಕೊಂಡರು. ಕೆಲ ಕಡೆ ವಯಸ್ಸಾದ ಮಹಿಳೆಯರನ್ನು ಭೇಟಿ ಮಾಡಿ ನಿಮಗೆ ಸರ್ಕಾರದಿಂದ ಎರಡು ಸಾವಿರ ಬರುತ್ತಿದೆಯೇ ಎಂದು ವಿಚಾರಿಸಿದರು. ಎಲ್ಲ 14 ವಾರ್ಡ್ಗಳಲ್ಲಿ ಜನ ಖುಷಿ ಖುಷಿಯಿಂದಲೇ ಅವರನ್ನು ಬರ ಮಾಡಿಕೊಂಡರು.
‘ಚುನಾವಣೆ ಪ್ರಚಾರ ಅಂದರೆ ನಮಗೇನು ಹೊಸತಲ್ಲ. ನಮ್ಮ ಖಂಡ್ರೆ ಮನೆತನ ಹಲವು ದಶಕಗಳಿಂದ ಜನ ಸೇವೆ ಮಾಡುತ್ತಿದೆ. ಭೀಮಣ್ಣ ಖಂಡ್ರೆ, ಈಶ್ವರ ಖಂಡ್ರೆ ಅವರು ಜಿಲ್ಲೆಯ ಅಭಿವೃದ್ಧಿಗೆ ಏನೆಲ್ಲ ಮಾಡಿದ್ದಾರೆ ಎಂಬುದು ತಮಗೆಲ್ಲ ಗೊತ್ತು. ಹೀಗಾಗಿ ಈ ಬಾರಿ ಸಾಗರ್ ಖಂಡ್ರೆ ಅವರನ್ನು ಗೆಲ್ಲಿಸಿ ತರುವ ಜವಾಬ್ದಾರಿ ನಿಮ್ಮ ಮೇಲಿದೆ’ ಎಂದು ಮತದಾರರಲ್ಲಿ ಮನವಿ ಮಾಡಿದರು.
ಮುಖಂಡ ಭೀಮಸೇನರಾವ ಸಿಂಧೆ ಮಾತನಾಡಿ, ‘ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆ ಜಾರಿಗೆ ಬರಲಿವೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಮುಖಂಡ ಬಸವರಾಜ ದೇಶಮುಖ, ಶರಣಪ್ಪ ಪಾಟೀಲ್, ಸುನೀಲಕುಮಾರ ದೇಶಮುಖ, ರತ್ನಾ ಪಾಟೀಲ್, ವಿಜಯಲಕ್ಷ್ಮೀ ಗುದಗೆ, ಲಕ್ಷ್ಮೀ ಮಜಿಗೆ, ಶೋಭಾ ಭೂಮೆ, ಆರ್ಯ ಭೂಮೆ, ಸಂತೋಷಿ ಮರಕಟ್ಟೆ, ಶಿವರಾಜ ದೇಶಮುಖ, ರಾಮಣ್ಣ ವಡಿಯಾರ್, ಚೆನ್ನಪ್ಪ ಉಪ್ಪೆ, ಅನಿಲ ನಿರ್ಮಳೆ, ಡಾ.ಫೈಯಾಜಾಲಿ, ಮಹೇಶ ಫುಲಾರಿ, ದತ್ತಾತ್ರಿ ಬಾಪುರೆ, ಶಿವು ಕಾಂಬಳೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.