
ಬೀದರ್: ಮಹಾತ್ಮ ಗಾಂಧೀಜಿಯವರ ‘ಹುತಾತ್ಮ ದಿನ’ದ ಅಂಗವಾಗಿ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನಕ್ಕೆ ನಗರದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಡಿವಿಬಿಡಿಸಿಒ ಅಧಿಕಾರಿ ಡಾ.ರಾಜಶೇಖರ ಪಾಟೀಲ ಚಾಲನೆ ನೀಡಿ, ಕುಷ್ಠರೋಗ ಒಂದು ಸಾಂಕ್ರಾಮಿಕವಾಗಿದ್ದು ಇದು ಯಾವುದೇ ಶಾಪ, ಪಾಪದಿಂದ ಬರುವುದಿಲ್ಲ. ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿದಾಗ ಜಿಲ್ಲೆಯನ್ನು ಕುಷ್ಠರೋಗ ಮುಕ್ತ ಮಾಡಬಹುದು ಎಂದು ಹೇಳಿದರು.
ಡಾ.ಶಂಕ್ರೆಪ್ಪ ಬೊಮ್ಮಾ ಮಾತನಾಡಿ, ಜಿಲ್ಲೆಯಲ್ಲಿ 60 ಕುಷ್ಠರೋಗಿಗಳಿದ್ದಾರೆ. ಈ ವರ್ಷ 51 ಹೊಸ ಪ್ರಕರಣ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಪರ್ಶ ಕುಷ್ಠರೋಗ ಜಾಗೃತಿ ಪಾಕ್ಷಿಕ ಅಭಿಯಾನವನ್ನು ಫೆ.13ರ ತನಕ ಜಿಲ್ಲೆಯಾದ್ಯಂತ ಆಚರಿಸಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬ್ಳೆ ಅವರು ಪ್ರತಿಜ್ಞೆ ಬೋಧಿಸಿದರು. ತಾಲ್ಲೂಕು ಅರೋಗ್ಯ ಅಧಿಕಾರಿ ಡಾ.ಸಂಗಾರೆಡ್ಡಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೆಟ್ಟಿ ಚನ್ನಶೆಟ್ಟಿ, ಮೇಲ್ವಿಚಾರಕ ಓಂಕಾರ ಮಲ್ಲಿಗೆ, ಆಪ್ತ ಸಮಾಲೋಚಕ ಸೀಮಪ್ಪ, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.