ADVERTISEMENT

ಅಪರೂಪದ ವನ್ಯಜೀವಿಗಳ ನೆಲೆಬೀಡು...ಬೀದರ್‌ನಲ್ಲಿವೆ ಅಳಿವಿನಂಚಿನ ಪ್ರಭೇದದ ಜೀವಿಗಳು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಮಾರ್ಚ್ 2026, 5:46 IST
Last Updated 3 ಮಾರ್ಚ್ 2026, 5:46 IST
   

ಬೀದರ್‌: ಝರಿಗಳ ನೆಲವೆಂದೇ ಗುರುತಿಸಿಕೊಂಡಿರುವ ಬೀದರ್‌ ಜಿಲ್ಲೆ ಅಪರೂಪದ ವನ್ಯಜೀವಿಗಳ ನೆಲೆಬೀಡು ಹೌದು.

ಸಮುದ್ರ ಮಟ್ಟದಿಂದ ಎತ್ತರದ ಪ್ರದೇಶದಲ್ಲಿರುವುದರಿಂದ ಬೀದರ್‌ ಜಿಲ್ಲೆ ಕೆಲವು ಅಪರೂಪದ ವನ್ಯಜೀವಿಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಇದರಲ್ಲಿ ಅಳಿವಿನಂಚಿನ ಪ್ರಭೇದದ ಕೆಲ ಕಾಡು ಜೀವಿಗಳೂ ಸೇರಿರುವುದು ವಿಶೇಷ.

ಇಡೀ ಜಗತ್ತಿನಲ್ಲೇ 150ರಿಂದ 200 ಜನಸಂಖ್ಯೆಯಷ್ಟೇ ಹೊಂದಿರುವ ಅಳಿವಿನಂಚಿನಲ್ಲಿರುವ ಕರಿನವಿಲು (ಲೆಸರ್‌ ಫ್ಲೋರಿಕನ್‌) ಕೂಡ ಬೀದರ್‌ನಲ್ಲಿರುವುದು ದೃಢಪಟ್ಟಿದೆ. ಇಷ್ಟೇ ಅಲ್ಲ, ಇವುಗಳ ಸಂತಾನೋತ್ಪತಿಯ ತಾಣವೂ ಹೌದು ಎಂಬುದನ್ನು ಇತ್ತೀಚಿನ ‘ಭಾರತೀಯ ವನ್ಯಜೀವಿ ಸಂಸ್ಥೆ’ (ಡಬ್ಲ್ಯೂಐಐ) ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ.

ADVERTISEMENT
ನರಿ

ರಾಜಸ್ತಾನ, ಆಂಧ್ರ ಪ್ರದೇಶ, ಗುಜರಾತ್‌ ಹಾಗೂ ಕರ್ನಾಟಕದ ಬೀದರ್‌ನಲ್ಲಷ್ಟೇ ಕರಿನವಿಲುಗಳು ಕಾಣಸಿಗುತ್ತವೆ. ಇವುಗಳ ಸಂತತಿ ರಕ್ಷಿಸಿ, ಇವುಗಳ ಸಂತಾನ ಹೆಚ್ಚಳಕ್ಕೆ ಪೂರಕವಾದ ವಾತಾವರಣ ಕಲ್ಪಿಸಲು ಈ ಹಿಂದೆ ರಾಜ್ಯ ಸರ್ಕಾರ ಅನುದಾನ ಕೂಡಾ ಮೀಸಲಿಟ್ಟಿತ್ತು. ನಂತರ ಆ ಕಡೆಗೆ ಲಕ್ಷ್ಯ ಹರಿಸಿಲ್ಲ ಎಂಬ ಆರೋಪಗಳಿವೆ. ಇದರ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಪರಿಸರವಾದಿಗಳು.

‘ಜಂಗಲ್‌ ಕ್ಯಾಟ್‌’

ಇದು ಬಿಟ್ಟರೆ ‘ಚಿಂಕಾರ’ (ಇಂಡಿಯನ್‌ ಡೆಜಲ್‌) ಕೂಡ ಇಲ್ಲಿವೆ. ಬೀದರ್‌ ಹೊರತುಪಡಿಸಿದರೆ ಇವುಗಳನ್ನು ರಾಜ್ಯದ ತುಮಕೂರು, ಬಾಗಲಕೋಟೆ, ಬೆಳಗಾವಿಯಲ್ಲಿ ನೋಡಬಹುದು. ನೋಡಲು ಥೇಟ್‌ ಜಿಂಕೆಗಳಂತೆ ಕಾಣಿಸುತ್ತವೆ. ಇದು ಬಿಟ್ಟರೆ ತೋಳ (ಇಂಡಿಯನ್‌ ಗ್ರೇ ವೂಲ್ಫ್‌), ನೀಲ್‌ಗಾಯ್‌, ಚೌಸಿಂಗಾ (ಫೋರ್‌ ಹಾರ್ನ್ಡ್‌ ಆ್ಯಂಟಿಲೋಪ್‌), ‘ಸೀವಿಯೆಟ್‌ ಕ್ಯಾಟ್‌’, ಕಾಡು ಹಂದಿಗಳು, ನರಿಗಳಿವೆ.

ಇನ್ನು, ಕೃಷ್ಣಮೃಗಗಳು, ಜಿಂಕೆಗಳ ನೆಚ್ಚಿನ ತಾಣವೂ ಹೌದು. ಬಯಲಿನಲ್ಲಿ ಒಟ್ಟಿಗೆ ನೂರಾರು ಸಂಖ್ಯೆಯ ಕೃಷ್ಣಮೃಗಗಳು, ಜಿಂಕೆಗಳನ್ನು ಬೀದರ್‌ ಸುತ್ತಮುತ್ತ ಕಣ್ತುಂಬಿಕೊಳ್ಳಬಹುದು. ಇನ್ನು, ‘ಡೆಮೊಜಿಲ್‌ ಕ್ರೇನ್‌’, ಬೆಳ್ಳಕ್ಕಿ, ಗುಬ್ಬಚ್ಚಿ ಸೇರಿದಂತೆ ಹಲವು ಜಾತಿಯ ಪಕ್ಷಿಗಳಿಗೆ ನೆಲೆಬೀಡಾಗಿದೆ. 

‘ಚಿಂಕಾರ’
ಬೀದರ್‌ ಜಿಲ್ಲೆ ಅಪರೂಪದ ವನ್ಯಜೀವಿಗಳ ತಾಣ. ಇವುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಶ್ರಮಿಸುತ್ತಿದೆ. ನಾಗರಿಕರು ಕೂಡ ಅವುಗಳಿಗೆ ತೊಂದರೆಯಾಗದ ರೀತಿಯಲ್ಲಿ ವ್ಯವಹರಿಸುವ ಅಗತ್ಯವಿದೆ.
ವಿವೇಕಾನಂದ ಬಿ. ನ್ಯಾಚುರಲಿಸ್ಟ್‌
ನೀಲ್‌ಗಾಯ್‌
ಚಿರತೆಗಳ ಚಲನವಲನ
ಬೀದರ್‌ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಚಿರತೆಗಳು ಕೂಡ ಕಾಣಿಸಿಕೊಂಡಿವೆ. ಎರಡು ವರ್ಷಗಳ ಹಿಂದೆ ಕಾರಂಜಾ ಜಲಾಶಯದ ಹಿನ್ನೀರಿನ ಭಾಗದಲ್ಲಿ ಚಿರತೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇತ್ತೀಚೆಗೆ ಅಲ್ಲಲ್ಲಿ ಚಿರತೆಗಳ ಓಡಾಟ ಕಂಡು ಬಂದಿದೆ. ಇನ್ನು ಮಾಂಜ್ರಾ ನದಿ ತೀರದಲ್ಲಿ ಅಲ್ಲಲ್ಲಿ ಆಗಾಗ ಮೊಸಳೆಗಳು ಕಾಣಿಸಿಕೊಳ್ಳುತ್ತವೆ. ಆದರೆ ವನ್ಯಜೀವಿ ಹಾಗೂ ಮಾನವ ಸಂಘರ್ಷದ ಪ್ರಕರಣಗಳ ಸಂಖ್ಯೆ ತೀರ ಇಲ್ಲವೆನ್ನುಷ್ಟರಮಟ್ಟಿಗೆ ಇದೆ. ಆದರೆ ಜಿಂಕೆ ಕೃಷ್ಣಮೃಗಗಳು ಹೊಲಕ್ಕೆ ನುಗ್ಗಿ ಬೆಳೆ ತಿಂದು ಹೋಗುವ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತವೆ.
ಇಂಡಿಯನ್‌ ಗ್ರೇ ವೊಲ್ಫ್‌ ಚಿತ್ರಗಳು: ವಿವೇಕಾನಂದ ಬಿ.
ಹುಲ್ಲುಗಾವಲು ಹೆಚ್ಚಿಸಲು ಕ್ರಮ
ಬೀದರ್‌ ಜಿಲ್ಲೆಯ ಕೋನಮೇಳಕುಂದಾ ಚಟ್ನಾಳ್ ಶಮಶೇರ್‌ನಗರ ಆಲೂರ್ ಬೇಲೂರ್‌ ಗಡಿಕುಶನೂರಿನಲ್ಲಿ ಹುಲ್ಲುಗಾವಲು ಪ್ರದೇಶ ಹೆಚ್ಚಿಸಲು ಅರಣ್ಯ ಇಲಾಖೆ ಶ್ರಮಿಸುತ್ತಿದೆ. 70ರ ದಶಕಕ್ಕೂ ಮುಂಚೆ ಈ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹುಲ್ಲುಗಾವಲು ಪ್ರದೇಶ ಇತ್ತು. 70ರ ದಶಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟಿರುವುದರಿಂದ ಅದರ ಪ್ರಮಾಣ ತಗ್ಗಿದೆ. ಈಗ ಪುನಃ ಹುಲ್ಲುಗಾವಲು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಇನ್ನು ಜಿಲ್ಲೆಯಲ್ಲಿ ಮಣ್ಣು ಗಣಿಗಾರಿಕೆ ನಡೆಯುತ್ತಿರುವುದರಿಂದ ಗುಡ್ಡಗಳು ಬೋಳಾಗುತ್ತಿವೆ. ಹೊಸ ಕಾಮಗಾರಿಗಳಿಂದ ವನ್ಯಜೀವಿಗಳ ಸಹಜ ಓಡಾಟದ ಮಾರ್ಗ ಬದಲಾಗುತ್ತಿದೆ. ಎಲ್ಲೆಂದರಲ್ಲಿ ಬ್ಲಾಸ್ಟ್‌ ಟಿಪ್ಪರಗಳ ಓಡಾಟಕ್ಕೆ ತೊಂದರೆಯಾಗುತ್ತಿದ್ದು ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆನ್ನುತ್ತಾರೆ ವನ್ಯಜೀವಿ ಪರ ಇರುವವರು.