
ಹುಲಸೂರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗ್ರಾಮಸ್ಥರು ಹಾಗೂ ಭಾರತೀಯ ಕಿಸಾನ ಸಂಘದ ಸದಸ್ಯರು ಉಪ ತಹಶೀಲ್ದಾರ್ ಸುನೀಲಕುಮಾರ ಸಜ್ಜನಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಹುಲಸೂರ: ತಾಲ್ಲೂಕಿನ ಮುಚಳಂಬ ಗ್ರಾಮದಲ್ಲಿ ಅತಿವೃಷ್ಟಿಯಿಂದ ಬೆಳೆ ಸಂಪೂರ್ಣ ಹಾನಿಯಾಗಿದ್ದರೂ, ಬೆಳೆ ಸಮೀಕ್ಷೆ ನಡೆಸಲು ಗ್ರಾಮ ಲೆಕ್ಕಾಧಿಕಾರಿ ಉಮೇಶ ಪೂಜಾರಿ ಅವರು ರೈತರಿಂದ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಗ್ರಾಮಸ್ಥರು, ಭಾರತೀಯ ಕಿಸಾನ ಸಂಘದ ಸದಸ್ಯರು ಆರೋಪ ಮಾಡಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿಗಳು ರೈತರಿಗೆ ಅವಾಚ್ಯ ಶಬ್ದದಿಂದ ಮಾಡುತ್ತಾರೆ. 371 (ಜೆ) ಸೇರಿದಂತೆ ಸರ್ಕಾರಿ ದಾಖಲಾತಿ ಪಡೆಯಲು ಹಣ ಕೇಳುತ್ತಾರೆ. ಬೆಳೆ ಸಮೀಕ್ಷೆಗೆ ಹಣ ಕೊಡದಿದ್ದರೆ ಸಮೀಕ್ಷೆ ದಾಖಲಿಸುವುದಿಲ್ಲ ಪರಿಣಾಮ ಬೆಳೆ ಹಾನಿಯಾಗಿದ್ದರೂ ಹಲವಾರು ರೈತರಿಗೆ ಇಂದಿಗೂ ಬೆಳೆ ಪರಿಹಾರ ಲಭಿಸಿಲ್ಲ.
ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ರೈತರ ಪರಿಸ್ಥಿತಿಯನ್ನು ಲೆಕ್ಕಿಸದೆ, ಅಧಿಕಾರಿಯ ನಿರ್ಲಕ್ಷ್ಯ ಮತ್ತು ಹಣದ ಬೇಡಿಕೆ ರೈತರಿಗೆ ದ್ವಂದ್ವ ಸಂಕಷ್ಟ ತಂದಿಟ್ಟಿದೆ. ಇಂತಹ ಅಧಿಕಾರಿಯನ್ನು ಬೇರೆಡೆಗೆ ವರ್ಗಾಯಿಸಿ, ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ಸಂಘಟನೆ ಸದಸ್ಯರು ಒತ್ತಾಯಿಸಿದರು.
ಈ ಕುರಿತು ಉಪ ತಹಶೀಲ್ದಾರ್ ಸುನೀಲಕುಮಾರ ಸಜ್ಜನಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು, ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ಶರಣಪ್ಪಾ ಕಾಮಶೆಟ್ಟಿ, ಮಹಾದೇವ ಕಾಮಶೆಟ್ಟಿ, ಗ್ರಾಮ ಕ್ರಾಂತಿ ಸೇನೆ ರಾಜ್ಯದ್ಯಕ್ಷ ಸಂದೀಪ ಮುಕಿಂದೇ, ಶರಣಪ್ಪಾ ಧನ್ನ್, ಸದಾನಂದ ದೇವಪ್ಪ, ಬಸವರಾಜ ರಾಘೋ, ಗಣೇಶ ಚಾಕುರೆ, ಪ್ರಕಾಶ ಜಾವಪ್ಪ, ಕಿರಣ ಕಾಮಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.