ADVERTISEMENT

ಬ್ರಿಮ್ಸ್ ಆಸ್ಪತ್ರೆ ಕಟ್ಟಡ ಕುಸಿತ: ತನಿಖೆಗೆ ಆದೇಶ

ಸಚಿವ ರಹೀಂ ಖಾನ್ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 19:30 IST
Last Updated 12 ಜೂನ್ 2019, 19:30 IST
ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂಖಾನ್ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು
ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂಖಾನ್ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು   

ಬೀದರ್: ಕಳಪೆ ಕಾಮಗಾರಿಯಿಂದ ಕುಸಿದಿದೆ ಎನ್ನಲಾದ ನಗರದ ಬ್ರಿಮ್ಸ್ ಆಸ್ಪತ್ರೆಯ ಕಟ್ಟಡದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂಖಾನ್ ಅವರ ದೂರಿಗೆ ಸ್ಪಂದಿಸಿದ ಅವರು, ಕಾಮಗಾರಿಗೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಿ, ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

‘ಬಡ ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ರಾಜ್ಯ ಸರ್ಕಾರ ₹ 115 ಕೋಟಿ ವೆಚ್ಚದಲ್ಲಿ ಸಕಲ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ನೂತನ ಆಸ್ಪತ್ರೆಯನ್ನು ನಿರ್ಮಿಸಿದೆ. ಆಸ್ಪತ್ರೆಗೆ ₹ 20 ಕೋಟಿ ಹೆಚ್ಚುವರಿ ಅನುದಾನವನ್ನೂ ಒದಗಿಸಿದೆ. ಆದರೆ, ಕಳಪೆ ಕಾಮಗಾರಿಯ ಕಾರಣ ಸರ್ಕಾರದ ಉದ್ದೇಶ ಬುಡಮೇಲಾಗಿದೆ. ಜೀವ ಉಳಿಸಿಕೊಳ್ಳಲು ಆಸ್ಪತ್ರೆಗೆ ಬರುವ ರೋಗಿಗಳು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಾಗಿದೆ. ವೈದ್ಯರು ಹಾಗೂ ಸಿಬ್ಬಂದಿ ಆತಂಕದಲ್ಲೇ ದಿನದೂಡುವಂತಾಗಿದೆ’ ಎಂದು ರಹೀಂ ಖಾನ್ ಅವರು ಮುಖ್ಯಮಂತ್ರಿಯ ಗಮನ ಸೆಳೆದರು.

ADVERTISEMENT

‘ಒಂದೂವರೆ ವರ್ಷದ ಹಿಂದಷ್ಟೇ ನಿರ್ಮಿಸಲಾದ ಆಸ್ಪತ್ರೆಯ ದ್ವಾರ ಸಂಖ್ಯೆ 1 ರ ಛಾವಣಿ ಈಚೆಗೆ ಸುರಿದ ಸಣ್ಣ ಮಳೆಗೆ ಕುಸಿದು ಬಿದ್ದಿದೆ. ರಾತ್ರಿ ವೇಳೆ ಘಟನೆ ನಡೆದ ಕಾರಣ ಭಾರಿ ಅನಾಹುತ ತಪ್ಪಿದೆ. ಕಳಪೆ ಕಾಮಗಾರಿಯಿಂದಾಗಿಯೇ ಕಟ್ಟಡ ಕುಸಿದು ಬಿದ್ದಿದೆ ಎನ್ನುವ ದೂರುಗಳು ಕೇಳಿ ಬಂದಿವೆ. ಕಟ್ಟಡ ನಿರ್ಮಾಣದಲ್ಲಿ ತೋರಿದ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶವೂ ವ್ಯಕ್ತವಾಗುತ್ತಿದೆ’ ಎಂದು ಹೇಳಿದರು.

‘ಆರೇಳು ತಿಂಗಳ ಹಿಂದೆ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೋಣೆಯ ಛಾವಣಿ ಕುಸಿದು ಬಿದ್ದಿತ್ತು. ಆಸ್ಪತ್ರೆಯಲ್ಲಿ ಅಳವಡಿಸಿದ ಲಿಫ್ಟ್ ಕೆಟ್ಟು ಹೋದ ಕಾರಣ ಅನೇಕರು ಅದರಲ್ಲಿ ಸಿಲುಕಿಕೊಂಡಿದ್ದರು. ಲಿಫ್ಟ್ ಬಾಗಿಲುಗಳನ್ನು ಮುರಿದು ಅವರನ್ನು ಸುರಕ್ಷಿತವಾಗಿ ಹೊರಗೆ ತರಲಾಗಿತ್ತು. ಅದಾದ ನಂತರ ದ್ವಾರ ಸಂಖ್ಯೆ 1 ರ ಮುಂಭಾಗದಲ್ಲಿ ನಿರ್ಮಿಸಿದ್ದ ಛಾವಣಿ ನೆಲಕ್ಕೆ ಉರುಳಿದೆ. ಹೀಗೆ ಒಂದಿಲ್ಲೊಂದು ಅವಘಡಗಳು ನಡೆಯುತ್ತಲೇ ಇವೆ’ ಎಂದು ತಿಳಿಸಿದರು.

‘ಸಣ್ಣ ಮಳೆಗೇ ಛಾವಣಿ ಕುಸಿದು ಬಿದ್ದ ಕಾರಣ, ಇನ್ನು ದಿನವಿಡೀ ಮಳೆ ಸುರಿದರೆ ಅಥವಾ ಭಾರಿ ಪ್ರಮಾಣದಲ್ಲಿ ಮಳೆಯಾದರೆ ಇಡೀ ಕಟ್ಟಡವೇ ಕುಸಿದು ಬೀಳಬಹುದು ಎನ್ನುವ ಭೀತಿ ರೋಗಿಗಳನ್ನು ಕಾಡುತ್ತಿದೆ’ ಎಂದು ಹೇಳಿದರು.

‘ಆಸ್ಪತ್ರೆಯ ಕಟ್ಟಡಕ್ಕೆ ಸರಿಯಾಗಿ ನೀರಿನ ಕ್ಯೂರಿಂಗ್ ಆಗಿಲ್ಲ. ಶೌಚಾಲಯ, ಮೂತ್ರಾಲಯಗಳಲ್ಲಿ ನೀರು ಸಮರ್ಪಕವಾಗಿ ಹರಿದು ಹೋಗುತ್ತಿಲ್ಲ. ಪ್ಲಂಬರಿಂಗ್, ವಿದ್ಯುತ್ ಸೇರಿದಂತೆ ಎಲ್ಲ ಕಾಮಗಾರಿಗಳು ಕಳಪೆಯಾಗಿವೆ. ಜಿಲ್ಲಾ ಆಸ್ಪತ್ರೆಗೆ ಕಾಯಿಲೆ, ಅಪಘಾತ ಮತ್ತಿತರ ಕಾರಣಕ್ಕಾಗಿ ನಿತ್ಯ ಸಾವಿರಾರು ಜನ ಬರುತ್ತಾರೆ. ಹೀಗಾಗಿ ಕಟ್ಟಡವೇನಾದರೂ ಕುಸಿದು ಬಿದ್ದರೆ ದೊಡ್ಡ ದುರಂತವೇ ಸಂಭವಿಸುವ ಸಾಧ್ಯತೆ ಇದೆ’ ಎಂದು ಮನವರಿಕೆ ಮಾಡಿದರು.

‘ರೋಗಿಗಳು ಹಾಗೂ ಸಾರ್ವಜನಿಕರ ಪ್ರಾಣದ ಹಿತದೃಷ್ಟಿಯಿಂದ ಕೂಡಲೇ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಬೇಕು. ತಾಂತ್ರಿಕ ತಜ್ಞರ ಸಲಹೆ ಪಡೆದು ಕಟ್ಟಡದಲ್ಲಿ ದೊಡ್ಡ ಮಟ್ಟದ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಅದಾದ ನಂತರವೇ ಆಸ್ಪತ್ರೆಯನ್ನು ಮತ್ತೆ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಕಟ್ಟಡದ ಕಳಪೆ ಕಾಮಗಾರಿಯ ಕುರಿತು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.