ಬೀದರ್: ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಿರ್ಮಾಣ ಮಾಡಲಾಗುತ್ತಿರುವ ಬಯಲು ರಂಗ ಮಂದಿರಕ್ಕೆ ಹಿರಿಯ ರಂಗಕರ್ಮಿ ದಿವಂಗತ ಚಂದ್ರಗುಪ್ತ ಚಾಂದಕವಠೆ ಹೆಸರಿಡಲಾಗುವುದು ಎಂದುಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ, ಮಕ್ಕಳ ಸಾಹಿತ್ಯ ಪರಿಷತ್ತು ಮತ್ತು ಜನಪದ ಕಲಾವಿದರ ಬಳಗದ ವತಿಯಿಂದ ನಗರದ ಜಿಲ್ಲಾ ರಂಗ ಮಂದಿರದ ಹೊರಾಂಗಣದಲ್ಲಿ ಏರ್ಪಡಿಸಿದ್ದ ರಂಗಕರ್ಮಿ ಚಂದ್ರಗುಪ್ತ ಚಾಂದಕವಠೆ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನಿಂತು ಹೋಗಿರುವ ರಂಗ ಚಟುವಟಿಕೆಗಳಿಗೆ ಪುನಶ್ಛೇತನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಲಾವಿದರಾದ ಸಂಗ್ರಾಮ ಇಂಗಳೆ, ಜಿಲ್ಲೆಯಲ್ಲಿ ಕಲೆ, ಸಾಹಿತ್ಯ, ನಾಟಕ, ರಂಗಭೂಮಿ ಬೆಳವಣಿಗೆಯಲ್ಲಿ ಚಂದ್ರಗುಪ್ತ ಚಾಂದಕವಠೆಯವರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ. ಮಾತನಾಡಿ, ಮಕ್ಕಳಿಗೆ ಜೀವನ ಮೌಲ್ಯ ಹಾಗೂ ಮಾನವೀಯತೆಯ ಪಾಠ ಹೇಳಿ ಕೊಡುವ ಅಗತ್ಯ ಇದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ್ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮನೋಹರ,
ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಬಿ,ಜೆ. ಪಾರ್ವತಿ ಸೋನಾರೆ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ವಿಜಯಕುಮಾರೆ ಸೋನಾರೆ, ವೀರಭದ್ರಪ್ಪ ಉಪ್ಪಿನ ಮಾತನಾಡಿದರು.
ದೇವದಾಸ ಚಿಮಕೋಡ, ಸುನೀಲ ಕಡ್ಡೆ ಮತ್ತು ಯಶವಂತ ಕುಚಬಾಳ ಅವರು ರಂಗಗೀತೆಗಳನ್ನು ಹಾಡಿದರು. ಯೇಸುದಾಸಸ ಲಿಯಮಬುರೆ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.