
ಬೀದರ್: ‘ಮುಖ್ಯರಸ್ತೆಯಲ್ಲಿ ಮಕ್ಕಳ ಮುಕ್ತ ಸಂಚಾರ’ ಶೀರ್ಷಿಕೆಯಡಿ ಫೆಬ್ರುವರಿ 14ರಂದು ಪ್ರಕಟಗೊಂಡ ‘ಪ್ರಜಾವಾಣಿ’ಗೆ ವರದಿ ಆಧರಿಸಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.
ಈ ಸಂಬಂಧ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರಿಗೆ ಪತ್ರ ಬರೆದಿದ್ದಾರೆ.
ಅಪ್ರಾಪ್ತರು ನಿತ್ಯ ಬೀದರ್ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ಗಳಲ್ಲಿ ಓಡಾಡುತ್ತಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. ಅಪ್ರಾಪ್ತರ ಕೈಗೆ ವಾಹನಗಳು ಕೊಟ್ಟರೆ ಪೋಷಕರು ನೇರ ಜವಾಬ್ದಾರರಾಗುತ್ತಾರೆ ಎಂಬ ನಿಯಮವಿದೆ. ಹೀಗಿದ್ದರೂ ಅವರು ಬೈಕ್, ಕಾರು ಓಡಿಸುವುದು ಸಾಮಾನ್ಯವಾಗಿದೆ. ಆರ್ಟಿಒ ಕಚೇರಿಯಿಂದ ಅಭಿಯಾನ ನಡೆಸಿದರೂ ಕ್ರಮವಾಗುತ್ತಿಲ್ಲ. ಹೀಗಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಇದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಕೂಡಲೇ ಪೊಲೀಸ್ ಇಲಾಖೆಯು ಕಾರ್ಯಪ್ರವೃತ್ತವಾಗಿ ಅಪ್ರಾಪ್ತ ಮಕ್ಕಳು ವಾಹನ ಚಲಾವಣೆ ಮಾಡದಂತೆ ತಡೆಯಬೇಕು. ಕ್ರಮ ಕೈಗೊಂಡ ವರದಿಯನ್ನು ಮೂರು ದಿನಗಳ ಒಳಗೆ ಆಯೋಗಕ್ಕೆ ಸಲ್ಲಿಸಬೇಕೆಂದು ಸೂಚನೆ ನೀಡಿದ್ದಾರೆ.