ADVERTISEMENT

ಬೀದರ್‌: ಫೆ.13ರಿಂದ ಸ್ವಚ್ಛತಾ ಕಾರ್ಮಿಕರಿಂದ ಕೆಲಸ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 16:07 IST
Last Updated 10 ಫೆಬ್ರುವರಿ 2024, 16:07 IST
ಕಲ್ಯಾಣ ಕರ್ನಾಟಕ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಮಾರುತಿ ಬಿ.ಕಂಟೆ ಹಾಗೂ ಪ್ರಮುಖರು ಬೀದರ್‌ನಲ್ಲಿ ಶನಿವಾರ ಅನಿರ್ದಿಷ್ಟಾವಧಿ ಧರಣಿಯ ಕರಪತ್ರ ಬಿಡುಗಡೆಗೊಳಿಸಿದರು
ಕಲ್ಯಾಣ ಕರ್ನಾಟಕ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಮಾರುತಿ ಬಿ.ಕಂಟೆ ಹಾಗೂ ಪ್ರಮುಖರು ಬೀದರ್‌ನಲ್ಲಿ ಶನಿವಾರ ಅನಿರ್ದಿಷ್ಟಾವಧಿ ಧರಣಿಯ ಕರಪತ್ರ ಬಿಡುಗಡೆಗೊಳಿಸಿದರು   

ಬೀದರ್‌: ‘ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ವೇತನ ನೇರ ಪಾವತಿಗೆ ಆಗ್ರಹಿಸಿ ಫೆ.13ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ’ ಎಂದು ಕಲ್ಯಾಣ ಕರ್ನಾಟಕ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಮಾರುತಿ ಬಿ.ಕಂಟೆ ತಿಳಿಸಿದರು.

ಫೆ.13ರಂದು ಕೆಲಸ ಬಹಿಷ್ಕರಿಸಿ ಧರಣಿ ಆರಂಭಿಸಲಾಗುವುದು. ಸರ್ಕಾರ ಬೇಡಿಕೆ ಈಡೇರಿಸುವವರೆಗೆ ಸತ್ಯಾಗ್ರಹ ಮುಂದುವರೆಸಲಾಗುವುದು ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಘನತ್ಯಾಜ್ಯ ನಿರ್ವಹಣೆಯ ಕೆಲಸ ಮಾಡುವ ವಾಹನ ಚಾಲಕರು, ನೈರ್ಮಲ್ಯ ಸೂಪರ್‌ವೈಸರ್‌ಗಳು, ಲೋಡರ್ಸ್‌, ಕ್ಲೀನರ್ಸ್‌, ಅಟೆಂಡರ್‌, ಆಪರೇಟರ್‌, ನೀರು ಸರಬರಾಜು ಸಹಾಯಕರು, ಬೀದಿ ದೀಪಗಳ ನಿರ್ವಹಣೆ ಮಾಡುವವರ ವೇತನ ನೇರ ಪಾವತಿಸಬೇಕೆಂದು ಹಲವು ವರ್ಷಗಳಿಂದ ಆಗ್ರಹಿಸುತ್ತ ಬರಲಾಗಿದೆ. ಆದರೆ, ಕಿವಿಗೊಟ್ಟಿಲ್ಲ. ಈಗ ಅನಿವಾರ್ಯವಾಗಿ ಧರಣಿ ನಡೆಸಬೇಕಾದ ಪರಿಸ್ಥಿತಿ ಬಂದಿದೆ ಎಂದರು.

ADVERTISEMENT

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 600 ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಬೀದರ್‌ ನಗರವೊಂದರಲ್ಲೇ 163 ಕಾರ್ಮಿಕರಿದ್ದಾರೆ. ನಸುಕಿನ ಜಾವ 4 ಗಂಟೆಗೆ ಎದ್ದು ನಗರವನ್ನು ಸ್ವಚ್ಛಗೊಳಿಸುತ್ತೇವೆ. ಊರಿನ ಹೊಲಸು ವಿಲೇವಾರಿ ಮಾಡುತ್ತೇವೆ. ಆದರೆ, ನಮ್ಮ ಸಮಸ್ಯೆಗಳಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಗೋಳು ತೋಡಿಕೊಂಡರು.

ಮುಖಂಡ ಸಿದ್ರಾಮ ಪಾಟೀಲ ಮಾತನಾಡಿ, ಚುನಾವಣೆಗೂ ಮುನ್ನ ಕಾಂಗ್ರೆಸ್‌ ಪಕ್ಷ ಭರವಸೆ ನೀಡಿತ್ತು. ಈಗಾಗಲೇ ಕಾಯಂ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲಾಗಿದೆ. ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಸಬೇಕು. ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ರಮೇಶ ಪಾಸ್ವಾನ್‌, ಯೇಸುದಾಸ್‌, ರಾಜಕುಮಾರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.