ಬೀದರ್: ‘ಈಶ್ವರ ಖಂಡ್ರೆ ಅವರೇ, ನಿಮ್ಮ ವಿರುದ್ಧ ನಾನು ಮಾಡಿರುವ ಆರೋಪಗಳಿಗೆ ಉತ್ತರಿಸುವ ಎದೆಗಾರಿಕೆ ಇದ್ದರೆ ನೇರ ಚರ್ಚೆಗೆ ಬನ್ನಿ. ಚರ್ಚೆಯಿಂದ ಪಲಾಯನ ಮಾಡಲು ವಾಮಮಾರ್ಗ ಅನುಸರಿಸಬೇಡಿ’ ಎಂದು ಸಂಸದ ಭವವಂತ ಖೂಬಾ ಸವಾಲು ಹಾಕಿದ್ದಾರೆ.
‘ನವೆಂಬರ್ 5ರ ಬೆಳಿಗ್ಗೆ 11ಕ್ಕೆ ನಗರದ ಚೆನ್ನಬಸವಲಿಂಗ ಪಟ್ಟದೇವರ ರಂಗಮಂದಿರದಲ್ಲಿ ನಡೆಸಲು ಉದ್ದೇಶಿಸಿದ್ದ ಬಹಿರಂಗ ಚರ್ಚೆಗೆ ನಾನು ಒಪ್ಪಿದ್ದೆ. ಆದರೆ, ನೀವು ಬೇರೆಡೆ ಒಯ್ಯಲು ಪ್ರಯತ್ನಿಸುತ್ತಿರು ವುದು ವಿಷಾದನೀಯ’ ಎಂದು ಖಂಡ್ರೆ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
‘ಭಾಲ್ಕಿ ತಾಲ್ಲೂಕಿನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಚರ್ಚಿಸಲು ನಾನು ಒಪ್ಪಿರುವೆ. ಆದರೆ, ನೀವು ನಿಮ್ಮ ಪಕ್ಷದ ವೇದಿಕೆ ಮಾಡಿಕೊಂಡು ರಾಜಕೀಯ ಸ್ಟಂಟ್ ಮಾಡಲು ಹೊರಟಿರುವುದು ಆರೋಪಗಳಿಂದ ತಪ್ಪಿಸಿಕೊಳ್ಳಲು ನಡೆಸುತ್ತಿರುವ ಹುನ್ನಾರವಾಗಿದೆ’ ಎಂದು ಟೀಕಿಸಿದ್ದಾರೆ.
‘ವಿವಿಧ ವಸತಿ ಯೋಜನೆಗಳ ಫಲಾನುಭವಿಗಳಿಗೆ ಉತ್ತರಿಸುವುದು ನಿಮ್ಮ ಜವಾಬ್ದಾರಿ. ಕಾರಣ, ನೀವೇ ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದೀರಿ. ನಮ್ಮಿಬ್ಬರ ಸಾಮರ್ಥ್ಯ ಜಿಲ್ಲೆಯ ಕಾರ್ಯ ಕರ್ತರು ನೋಡಿದ್ದಾರೆ. ಬಹಿರಂಗ ಚರ್ಚೆಯ ವೇದಿಕೆ ಕಾರ್ಯಕರ್ತರ ಜೈಕಾರಗಳಿಗೆ ಸೀಮಿತವಾಗಬಾರದು. ಸರಿಯಾದ ದಿಕ್ಕಿನಲ್ಲಿ ಚರ್ಚೆ ನಡೆಯಲು ಸಹಕರಿಸಬೇಕು’ ಎಂದು ಅವರು ತಿಳಿಸಿದ್ದಾರೆ.
‘ರಾಜ್ಯದ ಮಾಜಿ ಸಚಿವರಾಗಿ, ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜನರನ್ನು ಸೇರಿಸುವುದು ನಿಯಮಬಾಹಿರ ಎಂಬುದು ತಿಳಿದಿದ್ದರೂ, ಈ ಕಾರ್ಯಕ್ಕೆ ಇಳಿಯುವುದು ನಿಮ್ಮ ಭಂಡತನಕ್ಕೆ ಸಾಕ್ಷಿ. ಕಾಂಗ್ರೆಸ್ ಸಭೆಯಾಗಿದ್ದರೆ, ಅದಕ್ಕೆ ನನ್ನ ಸಹಮತ ಇಲ್ಲ’ ಎಂದು ತಿಳಿಸಿದ್ದಾರೆ.
‘ಪತ್ರಿಕಾಗೋಷ್ಠಿಯಲ್ಲಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದೀರಿ. ಅದು ನಿಮ್ಮ ಸಂಸ್ಕೃತಿ. ಇದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಕುಂದು ಬರುತ್ತದೆ ಹೊರತು ನನಗಲ್ಲ. ಕಾನೂನು ಮತ್ತು ಸುವ್ಯವಸ್ಥೆ ಗಮನದಲ್ಲಿ ಇರಿಸಿಕೊಂಡು ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಭಾವಿಸಿ ಸರ್ಕಾರದ ಮೇಲೆ ಗೂಬೆ ಕೂರಿಸಲು ಕುತಂತ್ರ ನಡೆಸಿದ್ದೀರಿ’ ಎಂದು ಆರೋಪಿಸಿದ್ದಾರೆ.
‘ಕಾರ್ಯಕ್ರಮದ ಸ್ವರೂಪ ನಿಶ್ಚಯವಾದ ಬಳಿಕ ಸಮಿತಿಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಹಿರಿಯ ಶಾಸಕ ಬಂಡೆಪ್ಪ ಕಾಶೆಂಪೂರ್ ಒಪ್ಪಿದ್ದಾರೆ. ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತ ವಿಷಯಗಳ ಕುರಿತು ಸಕಾರಾತ್ಮವಾಗಿ ಚರ್ಚಿಸಲು ಸಭೆ ವೇದಿಕೆಯಾಗಲಿ ಎನ್ನುವುದು ನನ್ನ ಆಶಯ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.