ADVERTISEMENT

ಲಿಂಗಾಯತ ಮುಖಂಡರ ದ್ವಂದ್ವ ಹೇಳಿಕೆ ಖಂಡನಾರ್ಹ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 5:52 IST
Last Updated 26 ಸೆಪ್ಟೆಂಬರ್ 2025, 5:52 IST
ಓಂಪ್ರಕಾಶ ರೊಟ್ಟೆ
ಓಂಪ್ರಕಾಶ ರೊಟ್ಟೆ   

ಬೀದರ್: ‘ಬಿಜೆಪಿಯಲ್ಲಿರುವ ಲಿಂಗಾಯತ ಮುಖಂಡರು ಲಿಂಗಾಯತರ ವೇದಿಕೆಯಲ್ಲಿ ಲಿಂಗಾಯತ ಎನ್ನುತ್ತಾರೆ. ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಣತಿಯಂತೆ ಮಾತನಾಡುತ್ತಾರೆ. ಜಾತಿವಾರು ಸಮೀಕ್ಷೆಯಲ್ಲಿ ಲಿಂಗಾಯತ ಬರೆಸಬೇಕು ಎಂಬುದನ್ನು ಹೇಳುವುದು ಬಿಟ್ಟು ಹಿಂದೂ ಬರೆಸಲು ಹೇಳುತ್ತಿದ್ದಾರೆ. ಇವರ ದ್ವಂದ್ವ ನಡೆ ಖಂಡನಾರ್ಹ’ ಎಂದು ವಿಶ್ವಗುರು ಬಸವ ಧರ್ಮ ಕೇಂದ್ರದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ತಿಳಿಸಿದರು.

ಬಸವ ನಾಡಿನಲ್ಲಿ ಹುನ್ನಾರ ನಡೆಯುತ್ತಿದೆ. ಬಿಜೆಪಿಯ ಲಿಂಗಾಯತ ಮುಖಂಡರಿಗೆ ತಾಕತ್ತಿದ್ದರೆ ಎಲ್ಲರನ್ನೂ ಒಂದು ಕಡೆಗೆ ಸೇರಿಸಿ ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಯನ್ನು ಬೆಂಬಲಿಸಬೇಕು. ಆಗ ಸಂಘ ಪರಿವಾರದವರು ಮತ್ತು ಪಂಚ ಪೀಠಾಧೀಶ್ವರರು ಗಡಗಡ ನಡುಗುತ್ತಾರೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಂಘ ಪರಿವಾರದವರು, ಪಂಚ ಪೀಠಾಧೀಶ್ವರರು ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ಬೇಡಿಕೆಗೆ ವಿರೋಧಿಸಬಾರದು. ದ್ವೇಷ ಮೂಡಿಸುವ ಕೆಲಸ ಮಾಡಬಾರದು. ವೈಜ್ಞಾನಿಕ ತಳಹದಿ ಮೇಲೆ ಬಸವಾದಿ ಶರಣರು ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ. ಜಾತಿವಾರು ಸಮೀಕ್ಷೆಯಲ್ಲಿ ಧರ್ಮದ ಇತರೆ ಕಾಲಂನಲ್ಲಿ ಲಿಂಗಾಯತರು ಲಿಂಗಾಯತ ಧರ್ಮ ಎಂದು ಬರೆಸಬೇಕು. ಜಾತಿ ಕಾಲಂನಲ್ಲಿ ಅವರವರ ಜಾತಿ ಹೆಸರು ಬರೆಸಬೇಕು ಎಂದು ಮನವಿ ಮಾಡಿದರು.

ADVERTISEMENT

ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ಲಿಂಗಾಯತ ಕಾವಿಧಾರಿಗಳೇ ನಿಮ್ಮ ದೇವರು ಯಾರೆಂದು ಕೇಳಿದ್ದಾರೆ. ಶಾಸಕ ಬಸವನಗೌಡ ಯತ್ನಾಳ ಕೂಡ ಹಗುರವಾಗಿ ಮಾತನಾಡಿದ್ದಾರೆ. ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡುವ ಇವರ ಬಾಯಿ ಬಚ್ಚಲ ಮೊರೆಯಾಗಿದೆ. ಪ್ರತಾಪ್‌ ಸಿಂಹ ಅಯೋಗ್ಯ ಎಂಬ ಕಾರಣಕ್ಕೆ ಅವರ ಪಕ್ಷ ಅವರಿಗೆ ಟಿಕೆಟ್‌ ನೀಡಿಲ್ಲ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.