ಬೀದರ್: ಬೀದರ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ನ ಔರಾದ್ ತಾಲ್ಲೂಕಿನ ಚಿಂತಾಕಿ ಕ್ಷೇತ್ರದ ಸದಸ್ಯೆ ಗೀತಾ ಪಂಡಿತ ಚಿದ್ರಿ ಹಾಗೂ ಉಪಾಧ್ಯಕ್ಷರಾಗಿ ಹುಮನಾಬಾದ್ ತಾಲ್ಲೂಕಿನ ದುಬಲಗುಂಡಿ ಕ್ಷೇತ್ರದ ಸದಸ್ಯ ಲಕ್ಷ್ಮಣರಾವ್ ಬುಳ್ಳಾ ಆಯ್ಕೆಯಾಗಿದ್ದಾರೆ.
ಗೀತಾ ಚಿದ್ರಿ ಅವರು ಜೆಡಿಎಸ್ನ ಮೂರು ಹಾಗೂ ಬಿಜೆಪಿಯ ಐವರು ಸದಸ್ಯರ ಬೆಂಬಲ ಪಡೆಯುವ ಮೂಲಕ ಚುನಾಯಿತರಾದರೆ, ಮಂಠಾಳ ಕ್ಷೇತ್ರದ ಬಿಜೆಪಿ ಸದಸ್ಯೆ ನಿರ್ಮಲಾ ಮಾನೆಗೋಪಾಳೆ ಕೇವಲ ಐದು ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣರಾವ್ ಬುಳ್ಳಾ ಅವಿರೋಧ ಆಯ್ಕೆಯಾದರು.
34 ಸಂಖ್ಯಾ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ನ 19 ಸದಸ್ಯರು ಇದ್ದಾರೆ. ಪಕ್ಷ ವಿರೋಧಿ ಚಟುವಟಿಕೆಯ ಮೇಲೆ ಮೂವರನ್ನು ಉಚ್ಚಾಟಿಸಲಾಗಿದೆ. ಉಳಿದ 16 ಸದಸ್ಯರಿಗೆ ಕಾಂಗ್ರೆಸ್ ವಿಪ್ ಜಾರಿ ಮಾಡಿತ್ತು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವ ಕಾರಣ ಜೆಡಿಎಸ್ನ ಮೂವರು ಬೇಷರತ್ತಾಗಿ ಬೆಂಬಲ ನೀಡಿದರು.
ಸ್ಥಾಯಿ ಸಮಿತಿಯಲ್ಲಿ ಸ್ಥಾನ ಕೊಡುವ ಭರವಸೆಯ ಮೇಲೆ ಬಿಜೆಪಿಯ 11 ಸದಸ್ಯರ ಪೈಕಿ ಐವರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.