ಬೀದರ್: ‘ಯಾವುದೇ ಸರ್ಕಾರ ಅಥವಾ ರಾಜಕಾರಣಿಗಳ ಪರವಾಗಿ ಸಭೆ ಸಮಾರಂಭಗಳಲ್ಲಿ ಧರ್ಮಗುರುಗಳು ವಿವಾದಾಸ್ಪದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ’ ಎಂದು ಸಂಸದ ಭಗವಂತ ಖೂಬಾ ಹೇಳಿದ್ದಾರೆ.
‘ದಾವಣಗೆರೆಯಲ್ಲಿ ಮಂಗಳವಾರ ನಡೆದ ಹರ ಜಾತ್ರೆಯಲ್ಲಿ ವಚನಾನಂದ ಸ್ವಾಮೀಜಿ ಮುರುಗೇಶ ನಿರಾಣಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಪಂಚಮಸಾಲಿ ಪೀಠವೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೈ ಬೀಡಲಿದೆ ಎಂದು ಹೇಳಿದ್ದು ನೋವಿನ ಸಂಗತಿಯಾಗಿದೆ’ ಎಂದು ತಿಳಿಸಿದ್ದಾರೆ.
‘ಸರ್ಕಾರ ರಚನೆಯಲ್ಲಿ ಎಲ್ಲ ಜಾತಿ ಧರ್ಮದವರು ಇರುತ್ತಾರೆ. ಧರ್ಮಗುರುಗಳು ಸಮಾಜದ ಎಲ್ಲ ಧರ್ಮದವರೂ ಸಾಮರಸ್ಯದಿಂದ ಬದುಕುವಂತೆ ಸರ್ಕಾರಕ್ಕೆ ಸಲಹೆ ನೀಡಬೇಕು’ ಎಂದರು.
‘ಸಾರ್ವಜನಿಕ ಸಮಾರಂಭದಲ್ಲಿ ನಮ್ಮ ಸಮಾಜದ ಅಭ್ಯರ್ಥಿಗೆ ಮಂತ್ರಿ ಮಾಡದಿದ್ದರೆ ಸಮಾಜ ನಿಮ್ಮೊಂದಿಗೆ ಇರುವುದಿಲ್ಲ ಎಂದು ಹೇಳಿಕೆಗಳನ್ನು ಕೊಡುತ್ತ ಹೋದರೆ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿದಂತೆ ಆಗುತ್ತದೆ. ಇದರಿಂದ ಅಧಿಕಾರದಲ್ಲಿದ್ದವರಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಆಗುವುದಿಲ್ಲ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.