
ಬೀದರ್: ಮುಂಬರುವ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಂಜಾರ ಪಾರ್ಕ್ ಅಭಿವೃದ್ಧಿಗೆ ₹300 ಕೋಟಿ ಮೀಸಲಿಡಬೇಕೆಂದು ಗೋವಿಂದ್ ಮಹಾರಾಜ, ಮುಖಂಡ ಬಸವರಾಜ ಪವಾರ್ ಆಗ್ರಹಿಸಿದರು.
2014ರಲ್ಲಿ ಸಿದ್ಧರಾಮಯ್ಯನವರು ಹುಮನಾಬಾದ್ ತಾಲ್ಲೂಕಿನ ಬೋರಂಪಳ್ಳಿ ಗ್ರಾಮದ ಬಳಿ ಸುಮಾರು 34.5 ಎಕರೆಯಲ್ಲಿ ಬಂಜಾರ ಟೆಕ್ಸ್ಟೈಲ್ ಪಾರ್ಕ್ ನಿರ್ಮಾಣಕ್ಕೆ ₹15 ಕೋಟಿ ಹಣ ಬಿಡುಗಡೆಗೊಳಿಸಿದ್ದರು. ಆದರೆ, ಟೆಕ್ಸಟೈಲ್ಸ್ ಪಾರ್ಕ್ಗೆ ₹300 ಕೋಟಿ ಅಗತ್ಯವಿದೆ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬಂಜಾರ ಸಾಂಪ್ರದಾಯಿಕ ಉಡುಪು, ಹೊಲಿಗೆ ತರಬೇತಿ, ವಿವಿಧ ಪ್ರಕಾರದ ಉಡುಪುಗಳ ತಯಾರಿಕೆಗೆ ಇದು ಸಹಕಾರಿಯಾಗಲಿದೆ. ವಿಶೇಷ ಮುತುವರ್ಜಿ ವಹಿಸಿ ₹300 ಕೋಟಿ ಬಜೆಟ್ ಮೀಸಲಿಟ್ಟರೆ ಅದನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಪಡಿಸಬಹುದು ಎಂದರು.
ಬೀದರ್ ಜಿಲ್ಲೆಯ ಸುಮಾರು 93 ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಬದಲಿಸಬೇಕೆಂಬ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಅಂತಹ ಗ್ರಾಮಗಳಿಗೆ ಬೆಲೆ ಬರುವಂತಾಗಬೇಕಾದರೆ ಪಂಚಾಯಿತಿ ಚುನಾವಣೆ ನಡೆಸಬೇಕು. ಸಂತ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಎಲ್ಲಾ ತಾಂಡಾ, ನಗರ, ಪಟ್ಟಣ ಪ್ರದೇಶಗಳಲ್ಲಿ ಸರ್ಕಾರದಿಂದಲೇ ಆಚರಿಸಬೇಕೆಂದು ಹೇಳಿದರು.
ಸರ್ಕಾರದಿಂದ ಆಚರಿಸಲಾಗುವ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮಕ್ಕೆ ಸಮಾಜದ ಸ್ವಾಮೀಜಿಯನ್ನು ಆಹ್ವಾನಿಸಬೇಕು ಎಂದು ಒತ್ತಾಯಿಸಿದರು.
ಸಮಾಜದ ಮುಖಂಡ ಗೋಪಾಲ್ ಸಿಂಗ್ ರಾಠೋಡ್, ಜಯಂತಿ ಉತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ವೀರಶೆಟ್ಟಿ ರಾಠೋಡ್ ಮಾತನಾಡಿ, ಫೆ. 15ರಂದು ಮಧ್ಯಾಹ್ನ 12.30ಕ್ಕೆ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಿಸಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಉದ್ಘಾಟಿಸುವರು ಎಂದು ತಿಳಿಸಿದರು.
ಸಮಾಜದ ಮುಖಂಡರಾದ ಗೋವರ್ಧನ್ ರಾಠೋಡ್, ಮಾಣಿಕರಾವ್ ಪವಾರ್, ದಯಾನಂದ ಜಾಧವ್, ಗೋರಸೇನಾ ರಾಜ್ಯ ಉಪಾಧ್ಯಕ್ಷ ರಮೇಶ್ ಜಾಧವ್, ರವಿ ಪವಾರ್, ಬಾಬುರಾವ್ ಪವಾರ್, ಬಳವಂತರಾವ್ ರಾಠೋಡ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.