ಹುಲಸೂರ: ತಾಲ್ಲೂಕು ಕೇಂದ್ರವಾಗಿ 3 ವರ್ಷ ಕಳೆದರೂ ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿಲ್ಲ. ಕಂದಾಯ ಸಚಿವರು ಇತ್ತ ಗಮನ ಹರಿಸಿ, ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಮುಖಂಡರು ತಹಶೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಸೋಮವಾರ
ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಧೀರ ಕಾಡಾದಿ ಮಾತನಾಡಿ, ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ದೇವೀಂದ್ರ ಭೋಪಳೆ ಅವರು ಬೀದರ್– ಲಾತೂರ ರಸ್ತೆಯಲ್ಲಿರುವ 8 ಎಕರೆ ಜಮೀನನ್ನು ಯಾವುದೆ ಷರತ್ತುಗಳಿಲ್ಲದೆ ಸರ್ಕಾರಕ್ಕೆ ನೀಡಲು ಒಪ್ಪಿದ್ದಾರೆ. ಆ ಜಾಗದಲ್ಲಿ ಕಾಯ್ದರಿಸಿದ ಸ್ಥಳ ಎಂದು ಫಲಕನ್ನು ಹಾಕಲಾಗಿದೆ. ಆದರೆ ಇದುವರೆಗೂ ಕಾಮಗಾರಿ ಆರಂಭಿಸುವ ಸೂಚನೆ ಸಿಕ್ಕಿಲ್ಲ ಎಂದು ತಿಳಿಸಿದರು.
ಹುಲಸೂರು ಜನರು ಸರ್ಕಾರಿ ಕೆಲಸಗಳಿಗಾಗಿ ಬಸವಕಲ್ಯಾಣಕ್ಕೆ ಹೋಗಬೇಕಾದ ಪರಿಸ್ಥಿತಿಯಿದೆ. ತಾಲ್ಲೂಕು ಕೇಂದ್ರದಲ್ಲಿ ಇರಬೇಕಾದ ಕನಿಷ್ಠ ಸೌಲಭ್ಯ ಇಲ್ಲಿಲ್ಲ. ಕೂಡಲೇ ಮಿನಿ ವಿಧಾನಸೌಧ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೇವೀಂದ್ರ ಭೂಪಳೆ ಮಾತನಾಡಿ, ತಾಲ್ಲೂಕಿನ ಜನರ ಹಿತಕ್ಕಾಗಿ ಕುಟುಂಬದ ಸದಸ್ಯರು ಭೂಮಿ ನೀಡಲು ಒಪ್ಪಿದ್ದೇವೆ. ಆದ್ದರಿಂದ ಸರ್ಕಾರ ವಿಳಂಬ ಮಾಡದೆ ಕಾಮಗಾರಿ ಆರಂಭಿ ಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಸಂಗಮೇಶ ಕುಡಂಬಲೆ, ಸೋಮಶಂಕರ ಕಾಡಾದಿ, ಸೋಮನಾಥ ನಂದಗೆ, ಬಸವರಾಜ ಜಡಗೆ, ಬಸವರಾಜ ಹರಕೂಡೆ, ವಿವೇಕಾನಂದ ಚಳಕಾಪೂರೆ, ಮಲಹಾರಿ ವಾಘಮರೆ, ಬಸವರಾಜ ಚೌರೆ, ಭೀಮಶಂಕರ ಕಾಡಾದಿ, ಸಿದ್ದು ಮಟ್ಟೆ, ಸಂಗಮೇಶ ಭೋಪಳೆ, ರಮೇಶ ಭೋಪಳೆ, ನಾಗೇಶ ಭೋಪಳೆ, ಪ್ರಕಾಶ ಮಂಗಾ, ನಾಗಪ್ಪ ಹಳಂಬ್ರೆ, ಶ್ರೀಕಾಂತ ಕೌಟೆ, ರಾಚಣ್ಣ, ಪವನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.