ಗುರುಪ್ರಸಾದ ಮೆಂಟೆ
ಹುಲಸೂರ: ತಾಲ್ಲೂಕಿನ ರಾಚಪ್ಪ ಗೌಡಗಾಂವ ಗ್ರಾಮದ ರೈತ ಅನಂತರಾವ ಪಾಟೀಲ ತಮ್ಮ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದಾರೆ.
ಯೂಟ್ಯೂಬ್ನಲ್ಲಿ ಮಾಹಿತಿ ಪಡೆದು ತೆಲಂಗಾಣದ ಸಂಗಾರೆಡ್ಡಿಯಿಂದ ಗುಲಾಬಿ ಬಣ್ಣದ ಕಾಯಿ ಬಿಡುವ ಸಸಿ ತಂದು ಒಂದು ಎಕರೆಯಲ್ಲಿ ನಾಟಿ ಮಾಡಿದ್ದಾರೆ. ಈಗ ಗಿಡಗಳು ಹಣ್ಣು ಬಿಟ್ಟಿವೆ.
‘ಇದು ಕಳ್ಳಿ ಸಸ್ಯಗಳ ಜಾತಿಗೆ ಸೇರಿದೆ. ಒಮ್ಮೆ ನೆಟ್ಟರೆ ಸಾಯುವುದಿಲ್ಲ. ಸಸಿ ನಾಟಿ ಮಾಡುವಾಗ ಮಾತ್ರ ಹೆಚ್ಚು ಖರ್ಚು ತಗಲುತ್ತದೆ. ಮೊದಲು ಸಿಮೆಂಟ್ ಕಂಬಗಳನ್ನು ನೆಡಬೇಕು. ಒಂದು ಎಕರೆಗೆ 500 ಕಂಬಗಳನ್ನು ಹಾಕಬಹುದು. ಬಳಿಕ ಅವುಗಳ ಬಳಿ ಸಸಿ ನಾಟಿ ಮಾಡಬೇಕು. ಒಂದು ಕಂಬಕ್ಕೆ ನಾಲ್ಕು ಸಸಿಗಳಂತೆ ಒಟ್ಟು 2,000 ಸಸಿ ನಾಟಿ ಮಾಡಬಹು ದು. ಇವುಗಳಿಗೆ ಹನಿ ನೀರಾವರಿ ಪದ್ಧತಿ ಮೂಲಕ ನೀರುಣಿಸಲಾಗುತ್ತದೆ’ ಎಂದು ತಿಳಿಸುತ್ತಾರೆ ರೈತ ಅನಂತರಾವ ಪಾಟೀಲ.
1 ಎಕರೆಗೆ ₹5 ಲಕ್ಷ ಖರ್ಚು ಬರುತ್ತದೆ. ಒಂದು ಬಾರಿ ವೆಚ್ಚ ಮಾಡಿದರೆ ಸತತ 20 ವರ್ಷ ಲಾಭ ಪಡೆಯಬಹುದು. ಸಸಿ ನಾಟಿ ಮಾಡಿದ ನಂತರ ಒಂದು ವರ್ಷಕ್ಕೆ ಫಸಲು ಬರುತ್ತದೆ ಎಂದು ಹೇಳಿದರು.
ಸದ್ಯ ಹುಮನಾಬಾದ್, ಬಸವಕಲ್ಯಾಣ ಹಾಗೂ ಹುಲಸೂರಿನ ಮಾರುಕಟ್ಟೆಯಲ್ಲಿ 1 ಕೆ.ಜಿ ಹಣ್ಣಿಗೆ ₹200 ಇದೆ. ಇದರಿಂದ ಮೊದಲನೆ ವರ್ಷ ₹3 ಲಕ್ಷ ಲಾಭ ಬಂದಿದೆ. ಇನ್ನೂ ₹5 ಲಕ್ಷ ಲಾಭ ಆಗಬಹುದು ಎನ್ನುತ್ತಾರೆ ಅವರು.
ಮಾಹಿತಿಗಾಗಿ ಅನಂತರಾವ್ ಪಾಟೀಲ ಅವರ ಮೊ.ಸಂ: 6362139273 ಸಂಪರ್ಕಿಸಬಹುದು.
ರೈತ ಅನಂತರಾವ ಪಾಟೀಲ ಅವರು ಭಾಲ್ಕಿ ಮತ್ತು ಹುಲಸೂರ ತಾಲ್ಲೂಕುಗಳಲ್ಲಿಯೇ ಮೊದಲ ಬಾರಿಗೆ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಈ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ. ಇಲಾಖೆಯಿಂದ ಸಹಾಯಧನ ನೀಡಲಾಗುವುದು–ಅವಿನಾಶ, ಸಹಾಯಕ ತೋಟಗಾರಿಕೆ ಅಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.