ಹುಮನಾಬಾದ್: ಪ್ರಸಕ್ತ ಸಾಲಿನ ಮುಂಗಾರು ಆರಂಭವಾಗಲು ಇನ್ನು 15 ದಿನಗಳ ಬಾಕಿ ಇರುವಾಗಲೇ ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತಿವೆ.
ಚಿಟಗುಪ್ಪ ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ ಒಟ್ಟು 62,085 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಾಗಿದೆ. ಈ ಪೈಕಿ ಸೋಯಾ ಹಾಗೂ ಅವರೆ ಬಿತ್ತನೆಗಾಗಿ ರೈತರು ಈಗಾಗಲೇ 20, 500 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಈಗಾಗಲೇ ಅವಶ್ಯಕ ಇರುವ 16 ಸಾವಿರ ಕ್ವಿಂಟಲ್ ದಾಸ್ತಾನು ಬೀಜವನ್ನು ಮಾಡಿಕೊಳ್ಳಲಾಗಿದೆ. ಉಳಿದಂತೆ ತೋಗರಿ, ಉದ್ದು, ಹೆಸರು 2,100 ಕ್ವಿಂಟಲ್ ಬೀಜ ದಾಸ್ತಾನು ಮಾಡಲಾಗಿದೆ.
ಹುಮನಾಬಾದ್ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಳ್ಳಿಖೇಡ್ ಬಿ., ದುಬಲಗುಂಡಿ, ಕನಕಟ್ಟಾ, ಘಾಟಬೋರಾಳ್ ಹಾಗೂ ಚಿಟ್ಟಗುಪ್ಪ ತಾಲ್ಲೂಕಿನ ನಿರ್ಣಾ, ಬೇಮಳಖೇಡಾ, ಮನ್ನಾಏಖೇಳ್ಳಿ ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಒಟ್ಟು 14 ಕಡೆಗಳಲ್ಲಿ ಬೀಜ ವಿತರಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಶಾಸಕ ರಾಜಶೇಖರ ಪಾಟೀಲ ಅವರ ಸಲಹೆ ಮೇರಿಗೆ ಚಿಟ್ಟಗುಪ್ಪ ತಾಲ್ಲೂಕಿನ ಕುಡಂಬಲ್ ಗ್ರಾಮದಲ್ಲಿ ಹೊಸ ಬೀಜ ಪೂರೈಕೆ ಕೇಂದ್ರ ಆರಂಭಿಸಲಾಗಿದೆ .
30 ಕೆ.ಜಿ. ತೂಕದ ಸೋಯಾ ಬೀಜ ಖರೀದಿಸಲು ಸಾಮನ್ಯ ವರ್ಗದ ರೈತರು ₹2,970 ನೀಡಬೇಕು. ಪರಿಶಿಷ್ಟ ಜಾತಿ ಪಂಗಡದ ರೈತರು ₹2,595 ಕೊಟ್ಟು ಖರೀದಿಸಬೇಕೆಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗೌತಮ ಮಾಹಿತಿ ನೀಡಿದರು.
70ರಿಂದ 80 ಮಿ.ಮೀ.ಮಳೆಯಾದರೆ ಮಾತ್ರ ಭೂಮಿ ಉತ್ತಮವಾಗಿ ಹದವಾಗುತ್ತದೆ. ಹೀಗಾಗಿ ರೈತರು ಅವಸರ ಮಾಡಬಾರದು ಎಂದೂ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.