ಬಸವಕಲ್ಯಾಣ: ‘ಅತಿವೃಷ್ಟಿಯಿಂದ ಈ ಭಾಗದ ರೈತರಿಗೆ ಅಪಾರ ನಷ್ಟವಾಗಿದ್ದು, ವಿಮಾ ಕಂತು ಭರಿಸಿದ ಎಲ್ಲರಿಗೂ ಬೆಳೆವಿಮೆಯ ಹಣ ಸಿಗುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಜಮಖಂಡಿ ಆಗ್ರಹಿಸಿದ್ದಾರೆ.
ನಗರದ ರೈತ ಭವನದಲ್ಲಿ ಸೋಮವಾರ ಆಯೋಜಿಸಿದ್ದ ರೈತ ಸಂಘದ ತಾಲ್ಲೂಕು ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿವರ್ಷ ಬೆಳೆ ವಿಮಾ ಕಂತು ತುಂಬಲಾಗುತ್ತಿದೆ. ಆದರೆ, ವಿಮಾ ಕಂಪನಿಯವರು ಅರ್ಹರಿಗೆ ಪರಿಹಾರ ನೀಡುತ್ತಿಲ್ಲ. ವಿಮಾ ಕಂತು ಭರಿಸುವುದಕ್ಕೆ ರೈತರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹೇಳಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುಭಾಷ ರಗಟೆ ಮಾತನಾಡಿ, ‘ಮಳೆ ಪ್ರಮಾಣ ಹೆಚ್ಚಿದ್ದರಿಂದ ಜಮೀನುಗಳಲ್ಲಿ ನೀರು ಸಂಗ್ರಹಗೊಂಡಿದೆ. ತೊಗರಿ, ಉದ್ದು, ಹೆಸರು ಮಣ್ಣು ಪಾಲಾಗಿವೆ. ಸೋಯಾಬೀನ್ ಇಳುವರಿ ಸಹ ಕಡಿಮೆ ಆಗುವ ಸಾಧ್ಯತೆಯಿದೆ. ಸರ್ಕಾರ ಕೂಡಲೇ ಗಮನ ಹರಿಸಿ ಪರಿಹಾರಧನ ವಿತರಿಸಬೇಕು. ವಿಮಾ ಕಂಪನಿಯ ಹಣ ದೊರಕುವಂತೆ ಪ್ರಯತ್ನಿಸಬೇಕು’ ಎಂದು ಆಗ್ರಹಿಸಿದರು.
ಸ್ಥಳಕ್ಕೆ ಬಂದಿದ್ದ ಕೃಷಿ ಅಧಿಕಾರಿ ಬಸವಪ್ರಭು ಮಾತನಾಡಿ, ‘ಈಗಾಗಲೇ ಎಲ್ಲೆಡೆ ಪರಿಶೀಲನೆ ನಡೆದಿದ್ದು, ಸಮೀಕ್ಷಾ ಕಾರ್ಯವೂ ಕೈಗೊಳ್ಳಲಾಗಿದೆ. ಯಾರಿಗೂ ಅನ್ಯಾಯ ಆಗದಂತೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಭರವಸೆ ನೀಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಯರಬಾಗ, ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾವತಿ ಶೇರಿಕಾರ, ಶಿವರುದ್ರ ತಾಟೆ, ನಾಗಶೆಟ್ಟಿ ಪಂಢರಗೇರಾ, ಜೈಪ್ರಕಾಶ ಸದಾನಂದೆ, ಸಂತೋಷ ಪಾಟೀಲ ಮಾತನಾಡಿದರು. ಕೈಲಾಶ ಭಾಲ್ಕೆ, ಮಡಿವಾಳಪ್ಪ ಪಾಟೀಲ ಸಸ್ತಾಪುರ, ರವಿ ಬೇಲೂರ, ಚಂದ್ರಕಾಂತ ಮೋಳಕೇರಾ, ಚಂದ್ರಪ್ಪ ಖಂಡಾಳ, ದಯಾನಂದ ಹಳ್ಳೆ, ವಿಠಲ ಸೋನಾರ, ಚಂದ್ರಕಾಂತ ಮಾಸ್ತರ, ವೆಂಕಟರಾವ ದೇಶಪಾಂಡೆ, ಸಂಜೀವ ಪಾಟೀಲ, ರಾಮಲಿಂಗ ಪಾಟೀಲ, ಶ್ರೀಶೈಲ ವಾತಡೆ, ಮಾರುತಿರಾವ ಕುಂಬಾರೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.