ADVERTISEMENT

ಕಮಲನಗರ: ಜಿಂಕೆ, ಕಾಡುಹಂದಿ ಕಾಟಕ್ಕೆ ಬೇಸತ್ತ ರೈತರು

ಸೋನಾಳ-ಹೊರಂಡಿ ಪ್ರದೇಶದಲ್ಲಿ ಬೆಳೆ ಹಾಳು

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 7:18 IST
Last Updated 14 ಜುಲೈ 2021, 7:18 IST
ಕಮಲನಗರ ತಾಲ್ಲೂಕಿನ ಸೋನಾಳ ಹೊರಂಡಿ ಗ್ರಾಮದಲ್ಲಿ ಜಿಂಕೆಗಳ ಗುಂಪೊಂದು ಹೊಲದಲ್ಲಿ ಓಡಾಡುತ್ತಿರುವುದು
ಕಮಲನಗರ ತಾಲ್ಲೂಕಿನ ಸೋನಾಳ ಹೊರಂಡಿ ಗ್ರಾಮದಲ್ಲಿ ಜಿಂಕೆಗಳ ಗುಂಪೊಂದು ಹೊಲದಲ್ಲಿ ಓಡಾಡುತ್ತಿರುವುದು   

ಕಮಲನಗರ: ಸೋನಾಳ-ಹೊರಂಡಿ ಸುತ್ತಲಿನ ಪ್ರದೇಶದಲ್ಲಿ ಕಾಡುಹಂದಿ ಹಾಗೂ ಜಿಂಕೆಗಳ ಕಾಟದಿಂದಾಗಿ ರೈತರು ತೀವ್ರ ಸಂಕಟ ಅನುಭವಿಸುತ್ತಿದ್ದಾರೆ.

‘ಸೋನಾಳ ಭುಜಮಡ್ಡಿ ಸುತ್ತಲಿನ ಪ್ರದೇಶದಲ್ಲಿ ಜಿಂಕೆಗಳು ಬೆಳೆ ಹಾಳು ಮಾಡುತ್ತಿದ್ದು, ಇದೀಗ ಕಾಡುಹಂದಿಗಳೂ ಹೊಲಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿವೆ’ ಎಂದು ಪ್ರಗತಿಪರ ರೈತ ಅಂಕುಶ ಹಣಮಶೆಟ್ಟಿ ತಿಳಿಸಿದ್ದಾರೆ.

‘ಹಂದಿಗಳ ಕಾಟದಿಂದಾಗಿ ರೈತರು ಚಿಂತಿತರಾಗಿದ್ದಾರೆ. ಬೆಳೆ ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದರೂ ಹಂದಿಗಳ ಕಾಟ ತಡೆಯುವುದು ಸಾಧ್ಯವಾಗುತ್ತಿಲ್ಲ. ಹಂದಿಗಳ ಜೊತೆಗೆ ಜಿಂಕೆಗಳೂ ಬೆಳೆ ತಿಂದು ಹಾಳು ಮಾಡುತ್ತಿವೆ. ರೈತರ ಕಷ್ಟ ಹೆಚ್ಚಿಸುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ಸಲ್ಲಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಹೊರಂಡಿ ಗ್ರಾಮದ ರೈತ ಶಾಲಿವಾನ ಬಿರಾದಾರ ದೂರಿದ್ದಾರೆ.

ADVERTISEMENT

ಬೆಳೆ ಹಾನಿಯಿಂದ ಚಿಂತೆಗಿಡಾದ ರೈತರಿಗೆ ಅರಣ್ಯ ಅಧಿಕಾರಿ, ಸಿಬ್ಬಂದಿ ಸೂಕ್ತ ಕ್ರಮ ಕೈಗೊಂಡು ಸ್ಪಂದಿಸಬೇಕು. ನಿಯಮಾನುಸಾರವಾಗಿ ಸರ್ವೇ ಮಾಡಿ ರೈತರ ಬೆಳೆ ಹಾಳುಮಾಡಿದ್ದು ಪರಿಗಣಿಸಿ, ಹೆಚ್ಚಿನ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಅವುಗಳನ್ನು ಅರಣ್ಯ ಪ್ರದೇಶಕ್ಕೆ ಓಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.