
ಬೀದರ್: ತಾಲ್ಲೂಕಿನ ಹೊನ್ನಿಕೇರಿ ಸಮೀಪದ ಸಾಯಿ ಬಾಬಾ ಮಂದಿರದ ಮೊದಲ ವಾರ್ಷಿಕೋತ್ಸವ ಕಾರ್ಯಕ್ರಮ ಡಿ. 25ರಂದು ಅದ್ದೂರಿಯಾಗಿ ಆಚರಿಸಲು ಸಿದ್ದೇಶ್ವರ ಸಾಯಿಬಾಬಾ ಮಂದಿರ ಟ್ರಸ್ಟ್ ನಿರ್ಧರಿಸಿದೆ.
ಅಂದು ಬೆಳಿಗ್ಗೆ ಸಾಯಿಬಾಬಾ ಅವರ ಪುತ್ಥಳಿಗೆ ಹೂಗಳಿಂದ ವಿಶೇಷ ರೀತಿಯಲ್ಲಿ ಅಲಂಕರಿಸಿ, ಪೂಜೆ ನೆರವೇರಿಸಲಾಗುವುದು. ಆನಂತರ ಭಕ್ತರಿಗೆ ಪ್ರಸಾದ ವಿತರಿಸಲಾಗುವುದು. ಸಂಜೆ ವೇಳೆ ಭಜನೆ ನಡೆಯಲಿದೆ ಎಂದು ಟ್ರಸ್ಟ್ ಖಜಾಂಚಿ ರಾಜಶೇಖರ ಪಾಟೀಲ ಅಷ್ಟೂರ ತಿಳಿಸಿದ್ದಾರೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ದೇವಸ್ಥಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಭಕ್ತರ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸುಸಜ್ಜಿತವಾದ ಸ್ನಾನಗೃಹ, ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಭಕ್ತರು, ಪ್ರವಾಸಿಗರು ಕುಳಿತುಕೊಂಡು ಪ್ರಸಾದ ಸೇವಿಸಲು ಟೆಂಟ್, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಲಾಗಿದೆ. ದೇಗುಲದ ನಿರ್ವಹಣೆಗಾಗಿಯೇ ಆರು ಜನ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.
ದೇವಸ್ಥಾನದಲ್ಲಿ 24X7 ವಿದ್ಯುತ್ ಪೂರೈಕೆ ಇರಬೇಕೆಂಬ ದೃಷ್ಟಿಯಿಂದ ಪ್ರತ್ಯೇಕ್ ಲೈನ್ ಹಾಕಿಕೊಂಡು ಟ್ರಾನ್ಸ್ಫಾರ್ಮ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದೇವಸ್ಥಾನಕ್ಕೆ ಸಿಸಿ ರಸ್ತೆ, ದೇಗುಲದ ಒಳಭಾಗದ ಎರಡೂ ಬದಿಯಲ್ಲಿ ಚಿಮ್ಮುವ ಕಾರಂಜಿ ಕೊಳ ನಿರ್ಮಿಸಿ, ದೇಗುಲದ ಸುತ್ತಲೂ ವಿವಿಧ ಬಗೆಯ ಹೂಗಳ ಉದ್ಯಾನ ನಿರ್ಮಿಸಲಾಗಿದೆ. ಕೂರಲು ಬೆಂಚ್ ಹಾಕಲಾಗಿದೆ. ಈ ಉದ್ಯಾನದಲ್ಲಿ ಬೆಳೆದ ಹೂಗಳಿಂದಲೇ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಯಾವುದೇ ಜಾತಿ, ಮತ, ಪಂಥದ ಭೇದವಿಲ್ಲ ಎಂದಿದ್ದಾರೆ.
ಟ್ರಸ್ಟ್ ಅಧ್ಯಕ್ಷ ಬಾಬುರಾವ್ ಗುದಗೆ ಅವರು ಅವರಿಗೆ ಸೇರಿದ ಸ್ವಂತ ಜಾಗವನ್ನು ದೇಗುಲ ನಿರ್ಮಾಣಕ್ಕೆ ದಾನ ಮಾಡಿದ್ದಾರೆ. 120X180 ಅಡಿ ವಿಸ್ತೀರ್ಣದಲ್ಲಿ ಭವ್ಯವಾದ ಮಂದಿರವನ್ನು ನಿರ್ಮಿಸಿ, ರಾಜಸ್ತಾನದಿಂದ ಮಾರ್ಬಲ್ನಲ್ಲಿ ಸಾಯಿಬಾಬಾ ಅವರ ಪುತ್ಥಳಿ ಮಾಡಿಸಿ, ಪ್ರತಿಷ್ಠಾಪಿಸಿ ಒಂದು ವರ್ಷ ಕಳೆದಿದೆ. ಶಿರಡಿಯಲ್ಲಿರುವ ಸಾಯಿಬಾಬಾ ಮಂದಿರವನ್ನು ಹೋಲುವ ರೀತಿಯಲ್ಲಿ 32 ಅಡಿ ಎತ್ತರದ ಗೋಪುರ ನಿರ್ಮಿಸಿ, ಅದರ ಮೇಲೆ 32 ಇಂಚಿನ ಕಲಶ ಪ್ರತಿಷ್ಠಾಪಿಸಲಾಗಿದೆ. ಮೊದಲ ವಾರ್ಷಿಕೋತ್ಸವವನ್ನು ಶ್ರದ್ಧಾ, ಭಕ್ತಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಡಿ.25ರಂದು ನಡೆಯಲಿರುವ ದೇಗುಲದ ಮೊದಲ ವಾರ್ಷಿಕೋತ್ಸವ ಸಮಾರಂಭಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ ದರ್ಶನ ಪಡೆದು ಪುನೀತರಾಗಬೇಕೆಂದು ಮನವಿ ಮಾಡಿದ್ದಾರೆ.
ದೇಗುಲದಲ್ಲಿ ಯಾರು ಬೇಕಾದರೂ ಮದುವೆ ಮುಂಜಿ ಜಾವಳ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಮಾಡಿಕೊಳ್ಳಬಹುದು. ಯಾವುದೇ ರೀತಿಯ ಶುಲ್ಕ ಇಲ್ಲ.ರಾಜಶೇಖರ ಪಾಟೀಲ ಅಷ್ಟೂರ ಖಜಾಂಚಿ ಸಿದ್ದೇಶ್ವರ ಸಾಯಿಬಾಬಾ ಮಂದಿರ ಟ್ರಸ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.